ಭಜನಾ ಮಂದಿರದ ಅಂಗಣದಲ್ಲಿ ಮಲ ವಿಸರ್ಜಿಸಿ, ಕೇಸರಿ ಬಾವುಟಕ್ಕೆ ಮೂತ್ರ ವಿಸರ್ಜನೆ ಮಾಡಿದ ಕಿಡಿಗೇಡಿಗಳು - Mahanayaka

ಭಜನಾ ಮಂದಿರದ ಅಂಗಣದಲ್ಲಿ ಮಲ ವಿಸರ್ಜಿಸಿ, ಕೇಸರಿ ಬಾವುಟಕ್ಕೆ ಮೂತ್ರ ವಿಸರ್ಜನೆ ಮಾಡಿದ ಕಿಡಿಗೇಡಿಗಳು

20/01/2021


Provided by

ಕೊಣಾಜೆ: ಉಳ್ಳಾಲ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಕಾಂಡಮ್ ಹಾಕಿದ ಪ್ರಕರಣದ ಬೆನ್ನಲ್ಲೇ ಕರಾವಳಿಯಲ್ಲಿ ಮತ್ತೊಂದು ಶಾಂತಿ ಕದಡುವ ಪ್ರಯತ್ನ ನಡೆದಿದ್ದು,  ಕೊಣಾಜೆಯಲ್ಲಿ ಭಜನಾ ಮಂದಿರದ ಅಂಗಣವನ್ನು ಗಲೀಜು ಮಾಡುವ ಮೂಲಕ ಉದ್ದೇಶ ಪೂರ್ವಕ ಶಾಂತಿ ಕದಡಲು ಯತ್ನಿಸಲಾಗಿದೆ.

ಕೊಣಾಜೆ ವಿವಿಯ ಆಡಳಿತ ಸೌಧದ ಕಟ್ಟಡದ ಬಳಿಯಿರುವ ಪರಂಡೆ ಪೂರ್ಣಗಿರಿ, ಮುಲಾರ ಗೋಪಾಲ ಕೃಷ್ಣ ಭಜನಾ ಮಂದಿರದ ಅಂಗಣದಲ್ಲಿ ವಿಕೃತಿ ಮೆರೆದಿರುವ ಕಿಡಿಗೇಡಿಗಳು, ಭಜನ ಮಂದಿರದ ಅಂಗಣದಲ್ಲಿ ಮಲವಿಸರ್ಜನೆ ಗೈದು, ಕೇಸರಿ ಧ್ವಜಕ್ಕೆ ಮೂತ್ರ ವಿಸರ್ಜನೆ ಮಾಡಿದ್ದಾರೆ.

ಕಿಡಿಗೇಡಿಗಳು ಮಂದಿರಕ್ಕೆ ನುಗ್ಗಲು ಪ್ರಯತ್ನಿಸಿದ್ದು, ಇದು ಸಾಧ್ಯವಾಗದೇ ಹೋದಾಗ ಹೊರಾಂಗಣದಲ್ಲಿ ಮಲವಿಸರ್ಜನೆ ಮಾಡಿದ್ದಾರೆ. ಆರೆಸ್ಸೆಸ್ ನ ಶಾಖೆಯ ಪುಸ್ತಕಗಳನ್ನು ಹೊರ ತೆಗೆದು ಅದರ ಮೇಲೆ ಕೂಡ ಮೂತ್ರ ವಿಸರ್ಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಮಂದಿರದ ಅಧ್ಯಕ್ಷರು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಸಮುದಾಯ ದ್ವೇಷ ಹರಡುವ ಕೃತ್ಯವಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸ ಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ