ತುಳುವೆರೆ ಆಯನೊ ಕೂಟ: ಪ್ರಥಮ ಬಾರಿಗೆ ತುಳು ಭಾಷೆಯಲ್ಲಿ ಭಾಗವತಿಕೆ ಸಹಿತ ಶ್ರೀದೇವಿ ಮಹಾತ್ಮೆ ಯಕ್ಷಗಾನ

27/09/2023
ದಕ್ಷಿಣ ಕನ್ನಡ: ತುಳುವೆರೆ ಆಯನೊ ಕೂಟದ ವತಿಯಿಂದ ಇದೇ ಪ್ರಥಮ ಬಾರಿಗೆ ತುಳು ಭಾಷೆಯಲ್ಲಿ ಭಾಗವತಿಕೆ ಸಹಿತ ಶ್ರೀದೇವಿ ಮಹಾತ್ಮೆ ಯಕ್ಷಗಾನವು ‘ಸಿರಿ ದೇವಿ ಮೈಮೆ’ ಎಂಬ ಹೆಸರಿನಲ್ಲಿ ಸೆಪ್ಟೆಂಬರ್ 30ರಂದು ಮಂಗಳೂರು ಟೌನ್ ಹಾಲ್ ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕೂಟದ ಅಧ್ಯಕ್ಷೆ ಶಮಿನಾ ಆಳ್ವ ತಿಳಿಸಿದ್ದಾರೆ.
ಅವರು ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಪರಾಹ್ನ 2 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೂಟದ 2023-24ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಗ್ರಹಣ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ‘ತುಳುವೆರೆ ಕರ್ಣ ಬಿರುದು’ ನೀಡಿ ಗೌರವಿಸಲಾಗುವುದು ಎಂದರು.
ಅಲ್ಲದೇ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರು ಬರೆದ ಯಕ್ಷಗಾನವನ್ನು ತುಳುವಿಗೆ ದೇವದಾಸ ಈಶ್ವರ ಮಂಗಲ ಭಾಷಾಂತರಿಸಿ ಸರಪಾಡಿ ಅಶೋಕ್ ಶೆಟ್ಟಿ ಸಂಪಾದಿಸಿದ ‘ಸಿರಿ ದೇವಿ ಮೈಮೆ’ ಪುಸ್ತಕ ಈ ಸಂದರ್ಭ ಬಿಡುಗಡೆಗೊಳ್ಳಲಿದೆ ಎಂದರು.