ರಾಜ್ಯ ಸರ್ಕಾರದ ನಿರ್ಧಾರ ಸರಿಯಾಗಿದೆ: ಕಾವೇರಿ ನೀರು ಹಂಚಿಕೆ ಬಗ್ಗೆ ಮಾಜಿ ಸಿಎಂ  ಎಸ್.ಎಂ ಕೃಷ್ಣ ಹೇಳಿಕೆ - Mahanayaka
6:56 AM Saturday 13 - September 2025

ರಾಜ್ಯ ಸರ್ಕಾರದ ನಿರ್ಧಾರ ಸರಿಯಾಗಿದೆ: ಕಾವೇರಿ ನೀರು ಹಂಚಿಕೆ ಬಗ್ಗೆ ಮಾಜಿ ಸಿಎಂ  ಎಸ್.ಎಂ ಕೃಷ್ಣ ಹೇಳಿಕೆ

s m krishna
01/10/2023

ಬೆಂಗಳೂರು: “ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಅಂತಿಮ ತೆರೆ ಎಳೆಯಲು ಕೇಂದ್ರ ಸರಕಾರವು ನಾಲ್ಕು ರಾಜ್ಯಗಳ ಜತೆ ಚರ್ಚೆ ಮಾಡಿ ಸಂಕಷ್ಟ ಸೂತ್ರ ರೂಪಿಸಬೇಕು” ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಅಭಿಪ್ರಾಯ ಪಟ್ಟರು.


Provided by

ಚಿತ್ರಕಲಾ ಪರಿಷತ್ ನಲ್ಲಿ ಕಾವೇರಿ ಸಮಸ್ಯೆ ಬಗ್ಗೆ ಮಾಧ್ಯಮಗಳು ಭಾನುವಾರ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಹೀಗೆ ಹೇಳಿದರು.

ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಯೋಗ್ಯ ತೀರ್ಮಾನ ತೆಗೆದುಕೊಳ್ಳಬೇಕು. ಶಾಶ್ವತ ಪರಿಹಾರಕ್ಕೆ ಇದೊಂದೇ ಮಾರ್ಗ.

“ಮಳೆ ಕಡಿಮೆ ಆದಾಗ ಕಾವೇರಿ ವಿವಾದ ಸದ್ದು ಮಾಡುತ್ತದೆ. ಮಳೆಗಾಲದಲ್ಲಿ ನೀರಿನ ಪ್ರಮಾಣ ಕುಸಿದಾಗ ನೀರಿಗೆ ಒತ್ತಡ ಇರುತ್ತದೆ. ನಮಗೆ ಹೋಲಿಸಿದರೆ ತಮಿಳುನಾಡಿನ ವಸ್ತುಸ್ಥಿತಿ ನಾಚಿಸುವಂತೆ ಇದೆ.

ನಾನು ಸಿಎಂ ಆಗಿದ್ದಾಗಲೂ ಕಾವೇರಿ ನೀರು ಹಂಚಿಕೆ ಬಗ್ಗೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆಗ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಉಭಯ ರಾಜ್ಯಗಳ ಸಿಎಂಗಳ ಜೊತೆ ಸಂಧಾನ ಮಾಡಲು ಪ್ರಯತ್ನಿಸಿದ್ದರು. ಆದರೆ ಸಫಲ ಆಗಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಬೇಕಾಯ್ತು.”

ರಾಜ್ಯ ಸರ್ಕಾರದ ನಿರ್ಧಾರ ಸರಿಯಾಗಿದೆ:

ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರ ಜಸ್ಟೀಸ್ ರವೀಂದ್ರ, ಜಸ್ಟೀಸ್ ವೆಂಕಟಾಚಲಯ್ಯ ಸೇರಿದಂತೆ ನಿವೃತ್ತ ನ್ಯಾಯಮೂರ್ತಿಗಳ ಸಲಹೆಗಳನ್ನು ತೆಗೆದುಕೊಂಡು ಮುಂದಿನ ಹೆಜ್ಜೆ ಇಡುತ್ತಿರುವುದು ಸರಿಯಾದ ನಿರ್ಧಾರವಾಗಿದೆ. ಅದೇ ರೀತಿ‌ ಮುಂದುವರೆಯಬೇಕು. ಇದನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ.

ಕಾವೇರಿ ಭಾಗದ ರೈತರು ಹೋರಾಟ ಮಾಡುತ್ತಿರುವುದು ಸ್ವಾಭಾವಿಕವಾಗಿಯೇ ಇದೆ. ಅವರ ಭಾವನೆಗಳನ್ನು, ನಿಲುವುಗಳನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ನಾನು ಅವರಿಗೆ ಶುಭ ಹಾರೈಸುತ್ತೇನೆ.

ಕೃಷ್ಣ ಅವರ ಸಲಹೆ ಸ್ವಾಗತಿಸಿದ ಡಿಸಿಎಂ:

“ಮಾಜಿ ಮುಖ್ಯಮಂತ್ರಿ ಕೃಷ್ಣ ಅವರು ಅತ್ಯಂತ ಅನುಭವಿ ನಾಯಕರು. ಅವರ ಅನುಭವದಿಂದ ಬಂದಿರುವ ಸಲಹೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದ ಜನರ ಹಿತ ಕಾಯುವ ಬದ್ಧತೆ ನಮ್ಮ ಸರ್ಕಾರಕ್ಕಿದೆ. ನಾವು ರಾಜಕೀಯಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಯದ ಹಿತಕ್ಕಾಗಿ ಯಾರೇ ಸಲಹೆಗಳನ್ನು ಕೊಟ್ಟರು ನಾವು ಅದನ್ನು ಸ್ವೀಕರಿಸುತ್ತೇವೆ” ಎಂದು ಶಿವಕುಮಾರ್ ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ