ಆಸ್ಪತ್ರೆ ಬಿಲ್ ಪಾವತಿಸಲಾಗದೆ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಎರಡೂವರೆ ಲಕ್ಷ ರೂ. ನೆರವು - Mahanayaka
12:57 PM Tuesday 16 - September 2025

ಆಸ್ಪತ್ರೆ ಬಿಲ್ ಪಾವತಿಸಲಾಗದೆ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಎರಡೂವರೆ ಲಕ್ಷ ರೂ. ನೆರವು

zameer ahmed
06/10/2023

ಬೆಂಗಳೂರು: ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಗರ್ಭಿಣಿ ಮಹಿಳೆ ಕುಟುಂಬ ವೈದ್ಯಕೀಯ ವೆಚ್ಚ ಭರಿಸಲು ಸಂಕಷ್ಟದಲ್ಲಿರುವ ಮಾಹಿತಿ ತಿಳಿದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಎರಡೂವರೆ ಲಕ್ಷ ರೂ. ಬಿಲ್ ಪಾವತಿ ಮಾಡಿದ್ದಾರೆ.


Provided by

ಅಷ್ಟೇ ಅಲ್ಲದೆ ಮೃತದೇಹ ಸ್ವಗ್ರಾಮವಾದ ಚಿಕ್ಕನಾಯಕನ ಹಳ್ಳಿಯ ಹುಳಿಯಾರು ಪಾಳ್ಯಕ್ಕೆ ತೆಗೆದು ಕೊಂಡು ಹೋಗಲು ಬೆಂಗಳೂರಿನಿಂದ ಆಂಬುಲೆನ್ಸ್ ವ್ಯವಸ್ಥೆ ಸಹ ಮಾಡಿಸಿದರು.

ಚಿಕ್ಕನಾಯಕನ ಹಳ್ಳಿ ಹುಳಿಯಾರು ಪಾಳ್ಯದ ಹಣ್ಣಿನ ವ್ಯಾಪಾರಿ ಜಬಿವುಲ್ಲಾ ಎಂಬುವರ ಪತ್ನಿ ಮೂವತ್ತು ವರ್ಷದ ಫಾತಿಮಾಬಿ ಎಂಬುವರು ತಿಪಟೂರು ಆಸ್ಪತ್ರೆಗೆ ದಾಖಲಾಗಿ ಜೆಪಿ ನಗರದ ಕ್ಷೇಮ ಆಸ್ಪತ್ರೆ ಯಲ್ಲಿ ಕಳೆದ 20 ದಿನಗಳ ಹಿಂದೆ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದರು. ನಂತರ ಅನಾರೋಗ್ಯ ಕಾಣಿಸಿಕೊಂಡು ಅಲ್ಲಿಂದ ಹಾಸನ ಆಸ್ಪತ್ರೆ ನಂತರ ಬೆಂಗಳೂರಿನ ಕ್ಷೇಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ  ಗುರುವಾರ ಮೃತಪಟ್ಟಿದ್ದರು.

ಆಸ್ಪತ್ರೆ ಚಿಕಿತ್ಸೆ ವೆಚ್ಚ 3.80 ಲಕ್ಷ ರೂ. ಆಗಿದ್ದು ಕುಟುಂಬದವರ ಬಳಿ 50 ಸಾವಿರ ರೂ. ಮಾತ್ರ ಇದ್ದು,ಮೃತದೇಹ ತೆಗೆದುಕೊಂಡು ಹೋಗಲು 3 ಲಕ್ಷ ರೂ. ಪಾವತಿಸಬೇಕಿತ್ತು. ಪತ್ನಿಯನ್ನು ಕಳೆದುಕೊಂಡ ಪತಿ ಹಣ ಪಾವತಿ ಮಾಡಲು ಆಗದೆ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ತಕ್ಷಣ  ಅಧಿಕಾರಿಗಳ ಮೂಲಕ ಆಸ್ಪತ್ರೆ ಆಡಳಿತ ಮಂಡಳಿ ಅವರ ಜತೆ ಚರ್ಚಿಸಿ 80 ಸಾವಿರ ರೂ. ಕಡಿಮೆ ಮಾಡಿಸಿ ಸಚಿವರೇ ಅಧ್ಯಕ್ಷ ರಾಗಿರುವ ವಖ್ಫ್  ಕೌನ್ಸಿಲ್ ಫಾರ್ ವುಮೆನ್ಸ್ ಮೂಲಕ ಎರಡು ಲಕ್ಷ ರೂ. ಹಾಗೂ ವೈಯಕ್ತಿಕ ವಾಗಿ 50 ಸಾವಿರ ರೂ.ಪಾವತಿ ಮಾಡಿ ಮೃತದೇಹ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ಸಹ ವ್ಯವಸ್ಥೆ ಮಾಡಿಸಿದರು.

ಹಾಸನದಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಿ ಎಂದಾಗ ಆಂಬುಲೆನ್ಸ್ ಚಾಲಕ ಜೆಪಿ ನಗರದ ಆಸ್ಪತ್ರೆ ಗೆ ಕರೆತಂದು ದಾಖಲು ಮಾಡಿದ್ದ, ಅಲ್ಲಿ ಚಿಕಿತ್ಸೆ ವೆಚ್ಚ ಪಾವತಿಸಲು ಆಗಿರಲಿಲ್ಲ.

ತಾಯಿ ಅನಾರೋಗ್ಯದ ನಡುವೆಯೇ ಮಗು ನೋಡಲು ಹಂಬಲಿಸಿ ಮಗುವನ್ನು ಅಪ್ಪಿ ಕೊಂಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದ ಸಚಿವರು, ವಿಶೇಷ ಪ್ರಕರಣ ಎಂದು ಭಾವಿಸಿ ನೆರವು ಕಲ್ಪಿಸಿದ್ದಾರೆ.

ಇತ್ತೀಚಿನ ಸುದ್ದಿ