ಚಾಮರಾಜನಗರ ಮಹಿಳೆ ಕಾರ್ಯವನ್ನು ಹೊಗಳಿದ ಪ್ರಧಾನಿ

ಚಾಮರಾಜನಗರ: ಭಾರತದ ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್ ಕಿ ಬಾತ್ ನಲ್ಲಿ ತ್ಯಾಜ್ಯದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ
ಚಾಮರಾಜನಗರ ಮಹಿಳೆ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ವರ್ಷಾ ಎಂಬವರ ಕರಕುಶಲ ಕಲೆಯ ಬಗ್ಗೆ ಪ್ರಧಾನಿ ಮೋದಿ ಇಂದು ಪ್ರಸ್ತಾಪಿಸಿ ವೋಕಲ್ ಫಾರ್ ಲೋಕಲ್ ಮಹತ್ವವನ್ನು ಸಾರಿದ್ದಾರೆ.
ಮನ್ ಕಿ ಬಾತ್ ನಿಂದ ಪ್ರೇರೇಪಣೆಗೊಂಡಿರುವ ವರ್ಷಾ ಅವರು, ಕರಕುಶಲ ಉದ್ಯಮ ಆರಂಭಿಸಿ, ಬಾಳೆಗಿಡದ ನಾರಿನಿಂದ ಕರಕುಶಲ ವಸ್ತುಗಳ ತಯಾರಿಸುತ್ತಿದ್ದಾರೆ, ಬಾಳೆ ದಿಂಡಿನಿಂದ ಉಪ್ಪಿನಕಾಯಿ, ಚಟ್ನಿಪುಡಿ ಸೇರಿದಂತೆ ವಿವಿಧ ತಿನಿಸು ತಯಾರಿಸುವ ಜೊತೆಗೆ ಐವರು ಮಹಿಳೆಯರು, ಇಬ್ಬರು ಪುರುಷರಿಗೆ ನೌಕರಿ ಕೊಟ್ಟಿದ್ದಾರೆ.
ವೋಕಲ್ ಫಾರ್ ಲೋಕಲ್ ನಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಪ್ರಧಾನಿ ತಮ್ಮ ರೇಡಿಯೋ ಭಾಷಣದಲ್ಲಿ ಹೇಳಿದ್ದಾರೆ.
ಕೆಲಸ ಗುರುತಿಸಿದ್ದು ಹೆಮ್ಮೆ: ಈ ಸಂಬಂಧ ವರ್ಷಾ ಪ್ರತಿಕ್ರಿಯೆ ನೀಡಿದ್ದು, ಚಾಮರಾಜನಗರದ ಉಮ್ಮತ್ತೂರಿನಲ್ಲಿ ನಾನು ಮಾಡುವ ಕೆಲಸವನ್ನು ಮೋದಿ ಅವರು ಗುರುತಿಸಿ ಪ್ರಸ್ತಾಪಿಸಿದ್ದು ಹೆಮ್ಮೆ ಎನಿಸುತ್ತದೆ, ನಾನು ಎಂಟೆಕ್ ಪದವೀಧರಳಾಗಿದ್ದು ಮನ್ ಕಿ ಬಾತ್ ನಿಂದ ಪ್ರೇರಣೆ ಪಡೆದು ಬಾಳೆ ನಾರು ಹಾಗೂ ದಿಂಡಿನಿಂದ ವಿವಿಧ ವಸ್ತುಗಳನ್ನು ತಯಾರಿಸಲು ಆರಂಭಿಸಿದೆ, ಮೇಳಗಳು, ಆನ್ ಲೈನ್ ಮಳಿಗೆ, ಸಾವಯವ ಮಳಿಗೆಗಳಲ್ಲಿ ನಮ್ಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.