ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಂಧ್ರದ ಮಹಿಳೆಯ ಚಿನ್ನಾಭರಣಗಳಿದ್ದ ಬ್ಯಾಗ್ ಕಳವು

26/11/2023
ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನಕ್ಕೆ ಬಂದ ಮಹಿಳೆಯೊಬ್ಬರ ಲಕ್ಷಾಂತರ ರೂ. ವೌಲ್ಯದ ಚಿನ್ನಾಭರ ಗಳಿದ್ದ ಬ್ಯಾಗ್ ಕಳವಾಗಿರುವ ಘಟನೆ ನ.24ರಂದು ರಾತ್ರಿ ವೇಳೆ ನಡೆದಿದೆ.
ಆಂಧ್ರಪ್ರದೇಶ ನೆಲ್ಲೂರಿನ ಜೆ.ಪದ್ಮಾವತಿ ನ.24ರಂದು ಬೆಳಗ್ಗೆ ಉಡುಪಿಗೆ ಬಂದು, ನಗರದ ಹೋಟೆಲ್ನಲ್ಲಿ ರೂಮ್ ಪಡೆದು ವಿಶ್ರಾಂತಿ ಮಾಡಿದ್ದರು. ನಂತರ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಹೋಗಿದ್ದು, ರಾತ್ರಿ ವೇಳೆ ಕಳ್ಳರು ಪದ್ಮಾವತಿ ಅವರ ಹ್ಯಾಂಡ್ ಬ್ಯಾಗ್ ಒಳಗೆ ಸಣ್ಣ ಪೌಚ್ನಲ್ಲಿ ಹಾಕಿಟ್ಟಿದ್ದ ಅವರ ಒಂದು ಚಿನ್ನದ ಬಳೆ, ಚಿನ್ನದ ಸರ ಮತ್ತು 2500ರೂ. ಹಣವನ್ನು ಕಳವು ಮಾಡಿರುವುದಾಗಿ ದೂರಲಾಗಿದೆ.
ಕಳವಾದ ಒಟ್ಟು 60 ಗ್ರಾಂ ಚಿನ್ನಾಭರಣಗಳ ಮೌಲ್ಯ 3,80,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.