ತೆಲಂಗಾಣದಲ್ಲಿ 'ಕೆಸಿಆರ್ ಕಾರು' ಪಂಕ್ಚರ್ ಮಾಡಿದ್ದು ಇವರೇ..! ಎಬಿವಿಪಿಯಿಂದ ಹೊರಗೆ ಬಂದು ತೆಲಂಗಾಣದಲ್ಲಿ 'ಕಾಂಗ್ರೆಸ್' ಕೋಟೆ ಕಟ್ಟಿದ ರೇವಂತ್‌ ರೆಡ್ಡಿ..! - Mahanayaka

ತೆಲಂಗಾಣದಲ್ಲಿ ‘ಕೆಸಿಆರ್ ಕಾರು’ ಪಂಕ್ಚರ್ ಮಾಡಿದ್ದು ಇವರೇ..! ಎಬಿವಿಪಿಯಿಂದ ಹೊರಗೆ ಬಂದು ತೆಲಂಗಾಣದಲ್ಲಿ ‘ಕಾಂಗ್ರೆಸ್’ ಕೋಟೆ ಕಟ್ಟಿದ ರೇವಂತ್‌ ರೆಡ್ಡಿ..!

04/12/2023

ತೆಲಂಗಾಣದಲ್ಲಿ ಕೆಸಿಆರ್ ಪಕ್ಷವನ್ನು ಕಾಂಗ್ರೆಸ್ ಪಕ್ಷವು ಸೋಲಿಸಿದೆ. ಈ‌ ಮೂಲಕ 10 ವರ್ಷಗಳ ಕೆಸಿಆರ್‌ ಆಡಳಿತದ ಬಳಿಕ ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹಿಂದಿನ ರೂವಾರಿಯೇ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅನುಮೂಲ ರೇವಂತ್‌ ರೆಡ್ಡಿ. ಇವರು ಪಾಲಿಟಿಕ್ಸ್ ಗೆ ಕಾಲಿಟ್ಟಿದ್ದು ಬಿಜೆಪಿ ಅಂಗಸಂಸ್ಥೆಯಾದ ಎಬಿವಿಪಿ ಮೂಲಕ ಎಂಬುದು ವಿಚಿತ್ರವಾದರೂ ಸತ್ಯ ಕಣ್ರೀ..

ಹೌದು. ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ರೇವಂತ್‌ ರೆಡ್ಡಿ, ವಿದ್ಯಾರ್ಥಿ ದೆಸೆಯಲ್ಲೇ ಎಬಿವಿಪಿ ಸಕ್ರಿಯ ಸದಸ್ಯರಾಗಿದ್ದರು. 2007 ರಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ವಿಧಾನ ಪರಿಷತ್‌ ಸದಸ್ಯರಾಗಿ ಚುನಾವಣಾ ಕಣಕ್ಕಿಳಿದು ವಿಜೇತರಾಗಿದ್ದರು.
ಬಳಿಕ ತೆಲುಗು ದೇಶಂ ಪಕ್ಷ ಸೇರಿದ ರೇವಂತ್‌ ರೆಡ್ಡಿ 2014 ರಲ್ಲಿ ಕೋಡಂಗಲ್‌ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮತ್ತೆ ಮುಂದಿನ ಚುನಾವಣೆಯಲ್ಲಿಯೂ ರೇವಂತ್‌ ಮರು ಆಯ್ಕೆಯಾಗಿದ್ದರು.

2017 ರಲ್ಲಿ ತೆಲುಗು ದೇಶಂ ಪಾರ್ಟಿ ತ್ಯಜಿಸಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ರೇವಂತ್‌ ರೆಡ್ಡಿ ಅವರು 2018 ರಲ್ಲಿ ಮೊದಲ ಬಾರಿಗೆ ಬಿಆರ್‌ಎಸ್‌ ಪಕ್ಷದ ಎದುರು ಸೋಲನ್ನಿ ಅನುಭವಿಸಿದರು.
2019 ರಲ್ಲಿ ಮಲ್ಕಜ್‌ಗಿರಿ ಕ್ಷೇತ್ರದ ಸಂಸದ ಸ್ಥಾನಕ್ಕೆ ನಿಂತು ಜಯಶೀಲರಾದ ರೇವಂತ್‌ ರೆಡ್ಡಿ 2021 ರಲ್ಲಿ ತೆಲಂಗಾಣ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷರಾಗಿ ಆಯ್ಕೆಯಾದರು.

ಇಂದು ಸಿಎಂ ರೇಸಿನಲ್ಲಿರುವ ರೇವಂತ್‌ ರೆಡ್ಡಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭದ್ರ ನೆಲೆ ಒದಗಿಸುವಲ್ಲಿ ಅವಿರತವಾಗಿ ದುಡಿದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ರಾಹುಲ್ ಗಾಂಧಿ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತರೆಂದು ಪರಿಗಣಿಸಲ್ಪಟ್ಟಿರುವ ಫುಟ್ಬಾಲ್ ಪ್ರೇಮಿ ರೆಡ್ಡಿ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ದೃಷ್ಟಿಯಿಂದ ಮುಖ್ಯಮಂತ್ರಿಯಾಗಬಹುದು.

ಇತ್ತೀಚಿನ ಸುದ್ದಿ