ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ: ಕೇಂದ್ರದಿಂದ ತುರ್ತು ಸಭೆ - Mahanayaka
9:21 AM Thursday 15 - January 2026

ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ: ಕೇಂದ್ರದಿಂದ ತುರ್ತು ಸಭೆ

20/12/2023

ದೇಶದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಕೇರಳದಲ್ಲಿ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳಲ್ಲಿ ಹಠಾತ್ ಹೆಚ್ಚಳವನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಸಭೆ ನಡೆಸಿತು‌. ಈ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ವಹಿಸಿದ್ದರು. ಕೇಂದ್ರ ಸಚಿವರಾದ ಎಸ್.ಪಿ.ಸಿಂಗ್ ಬಘೇಲ್, ಭಾರತಿ ಪ್ರವೀಣ್ ಪವಾರ್, ಆರೋಗ್ಯ ಕಾರ್ಯದರ್ಶಿ ಸುಧಾಂಶ್ ಪಂತ್, ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿ ಡಾ.ರಾಜೀವ್ ಬಹ್ಲ್ ಮತ್ತು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಸಭೆಯಲ್ಲಿ ಭಾಗವಹಿಸಿದ್ದರು.

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕೇರಳದಲ್ಲಿ ಮಂಗಳವಾರ 292 ಹೊಸ ಕೋವಿಡ್ -19 ಸಕ್ರಿಯ ಪ್ರಕರಣಗಳು ಮತ್ತು ಮೂರು ಸಾವುಗಳು ವರದಿಯಾಗಿವೆ. ಈ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,041 ಕ್ಕೆ ಏರಿದೆ.

ಕಳೆದ 24 ಗಂಟೆಗಳಲ್ಲಿ 224 ಜನರು ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಕೆಯ ಸಂಖ್ಯೆ 68.37 ಲಕ್ಷಕ್ಕೆ (68,37,203) ತಲುಪಿದೆ.
ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದರೂ, ವೈರಸ್ ಸೋಂಕನ್ನು ನಿಭಾಯಿಸಲು ರಾಜ್ಯವು ಉತ್ತಮವಾಗಿ ಸಿದ್ಧವಾಗಿರುವುದರಿಂದ ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದರು.

ಕೋವಿಡ್ ರೋಗಿಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲು ಮತ್ತು ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳು, ಕೊಠಡಿಗಳು, ಆಮ್ಲಜನಕದ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್ ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ