ತಮಿಳುನಾಡಿನಲ್ಲಿ ‘ಬಿಹಾರ ಜನರು ಶೌಚಾಲಯವನ್ನು ಸ್ವಚ್ಛಗೊಳಿಸಿ’ ಎಂದ ಡಿಎಂಕೆ ನಾಯಕ: ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಉತ್ತರ ಭಾರತೀಯರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬ ಬಿಜೆಪಿ ಮಿತ್ರಪಕ್ಷ ಡಿಎಂಕೆ ನಾಯಕನ ಹೇಳಿಕೆಗೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಹಾರದ ವಲಸಿಗರು ತಮಿಳುನಾಡಿನಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂಬ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಾದವ್, ಡಿಎಂಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿದೆ ಮತ್ತು ಅದರ ನಾಯಕರು ಅಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು ಎಂದು ಹೇಳಿ ಈ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಡಿಎಂಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿದೆ. ಆ ಪಕ್ಷದ ಯಾವುದೇ ನಾಯಕ ಉತ್ತರ ಪ್ರದೇಶ ಮತ್ತು ಬಿಹಾರದ ಜನರ ಬಗ್ಗೆ ಏನಾದರೂ ಹೇಳಿದ್ದರೆ ಅದು ಖಂಡನೀಯ. ನಾವು ಅದನ್ನು ಒಪ್ಪುವುದಿಲ್ಲ. ಯುಪಿ ಮತ್ತು ಬಿಹಾರದ ಕಾರ್ಮಿಕರಿಗೆ ದೇಶಾದ್ಯಂತ ಬೇಡಿಕೆ ಇದೆ. ಅವರು ಹೋಗದಿದ್ದರೆ, ಆ ರಾಜ್ಯಗಳಲ್ಲಿನ ಜೀವನವು ಸ್ಥಗಿತಗೊಳ್ಳುತ್ತದೆ. ಜನರು ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು” ಎಂದು ಯಾದವ್ ಹೇಳಿದ್ದಾರೆ.
ಒಂದು ನಿರ್ದಿಷ್ಟ ಜಾತಿ ಅಥವಾ ಸಮುದಾಯದ ಜನರು ಮಾತ್ರ ಶೌಚಾಲಯಗಳನ್ನು ಏಕೆ ಸ್ವಚ್ಛಗೊಳಿಸುತ್ತಾರೆ ಎಂದು ಡಿಎಂಕೆ ನಾಯಕ ಕೇಳಿದ್ರೆ ಅದು ಅರ್ಥಪೂರ್ಣವಾಗುತ್ತಿತ್ತು ಎಂದು ಯಾದವ್ ಹೇಳಿದರು. ಬಿಹಾರ ಮತ್ತು ಯುಪಿಯ ಜನರು ಗಟಾರುಗಳನ್ನು ಸ್ವಚ್ಛಗೊಳಿಸಲು ಬರುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ, ಇದು ಖಂಡನೀಯ. ಎಲ್ಲಾ ಪಕ್ಷಗಳ ನಾಯಕರು ಇಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು. ಇದು ಒಂದು ದೇಶ. ನಾವು, ಬಿಹಾರದ ಜನರು ಹಾಗೂ ಇತರ ಪ್ರದೇಶಗಳ ಜನರನ್ನು ಗೌರವಿಸುತ್ತೇವೆ ಮತ್ತು ನಾವು ಅದನ್ನೇ ನಿರೀಕ್ಷಿಸುತ್ತೇವೆ. ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಉತ್ತರ ಪ್ರದೇಶ ಮತ್ತು ಬಿಹಾರದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಕರು ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಮಾರನ್ ಅವರು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ಡಿಎಂಕೆ ನಾಯಕರೊಬ್ಬರು ಉತ್ತರ ಭಾರತೀಯರನ್ನು ಅವಮಾನಿಸುವ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಹಿಂದಿ ಕಲಿತವರು ಚೆನ್ನೈನಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದಾರೆ ಎಂದು ಡಿಎಂಕೆ ಮಾಜಿ ಸಚಿವ ಪೊನ್ಮುಡಿ ಈ ಹಿಂದೆ ಹೇಳಿಕೆ ನೀಡಿದ್ದರು.