ತಾಯಿಯ ಶವದ ಮುಂದೆ ಆಕೆಯ ಚಿನ್ನಾಭರಣಕ್ಕಾಗಿ ಮಕ್ಕಳ ಬಡಿದಾಟ! - Mahanayaka

ತಾಯಿಯ ಶವದ ಮುಂದೆ ಆಕೆಯ ಚಿನ್ನಾಭರಣಕ್ಕಾಗಿ ಮಕ್ಕಳ ಬಡಿದಾಟ!

rajastan
17/05/2025

ತಾಯಿಯ ಚಿನ್ನಾಭರಣಕ್ಕಾಗಿ ಗಲಾಟೆ ಮಾಡಿದ ವ್ಯಕ್ತಿಯೊಬ್ಬ ತಾಯಿ ಅಂತ್ಯಸಂಸ್ಕಾರಕ್ಕಾಗಿ ಮಾಡಲಾಗಿದ್ದ ಚಿತೆಯ ಮೇಲೆ ಹತ್ತಿ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿರುವ ವಿಲಕ್ಷಣ ಘಟನೆ ರಾಜಸ್ಥಾನದ ಲೀಲಾ ಕಾ ಬಸ್ ಕಿ ಧನಿ ಗ್ರಾಮದಲ್ಲಿ ನಡೆದಿದೆ.

ಮೇ 3 ರಂದು ರಾಜಸ್ಥಾನದ ಲೀಲಾ ಕಾ ಬಸ್ ಕಿ ಧನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭೂರಿ ದೇವಿ ಎಂಬ ವೃದ್ಧೆ ಮೇ 3 ರಂದು ನಿಧನರಾಗಿದ್ದರು. ಮೃತ ಮಹಿಳೆಗೆ ಏಳು ಗಂಡು ಮಕ್ಕಳಿದ್ದರು. ಆ ಗ್ರಾಮದಲ್ಲಿ ಆರು ಜನ ಇದ್ದರೂ, ವೃದ್ಧೆಯ ಐದನೇ ಮಗ ಓಂಪ್ರಕಾಶ್ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಕಳೆದ ಕೆಲವು ವರ್ಷಗಳಿಂದ, ಓಂ ಪ್ರಕಾಶ್ ಮತ್ತು ಅವರ ಉಳಿದ ಸಹೋದರರು ಕುಟುಂಬದ ಆಸ್ತಿಯ ಬಗ್ಗೆ ಆಗಾಗ ಜಗಳ ಮಾಡುತ್ತಿದ್ದರು. ಆಸ್ತಿಯಲ್ಲಿ ಪಾಲು ಬೇಕೆಂದು ಗಲಾಟೆ ಮಾಡುತ್ತಿದ್ದರು.

ಭೂರಿ ದೇವಿ ಸಾವಿನ ನಂತರ, ವೃದ್ಧೆಯ ದೇಹದಿಂದ ಬೆಳ್ಳಿ ಆಭರಣಗಳು ಮತ್ತು ಇತರ ಆಭರಣಗಳನ್ನು ಮೃತದೇಹದಿಂದ ಹೊರತೆಗೆದರು. ಇದಾದ ನಂತರ, ವೃದ್ಧೆಯ ಶವವನ್ನು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ತಾಯಿಯ ಎಲ್ಲಾ ಆಭರಣಗಳನ್ನು ವೃದ್ಧ ಮಹಿಳೆಯ ಹಿರಿಯ ಮಗ ಗಿರಿಧರಿಗೆ ಹಸ್ತಾಂತರಿಸಲಾಯಿತು.

ಬಳಿಕ ಅಂತ್ಯಸಂಸ್ಕಾರಕ್ಕೆ ಚಿತೆ ಸಿದ್ಧಪಡಿಸುವ ಸಂದರ್ಭದಲ್ಲಿ ಸಹೋದರರ ನಡುವೆ ತಾಯಿಯ ಆಭರಣಕ್ಕಾಗಿ ಜಗಳ ಆರಂಭಗೊಂಡಿದೆ. ಉಳಿದ ಸಹೋದರರೊಂದಿಗೆ ಓಂಪ್ರಕಾಶ್ ಕೂಡ ತನ್ನ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನಕ್ಕೆ ಬಂದರು. ಆದರೆ ಅಲ್ಲಿ ಅವನು ತನ್ನ ತಾಯಿಯ ಎಲ್ಲಾ ಆಭರಣಗಳನ್ನು ತನಗೆ ಒಪ್ಪಿಸಬೇಕೆಂದು ಪಟ್ಟುಹಿಡಿದನು.

ತನ್ನ ಸಹೋದರರೊಂದಿಗಿನ ವಾಗ್ವಾದದ ನಡುವೆ, ಓಂಪ್ರಕಾಶ್ ಇದ್ದಕ್ಕಿದ್ದಂತೆ ತನ್ನ ತಾಯಿಯ ಚಿತೆಯ ಮೇಲೆ ಹತ್ತಿ ಮಲಗಿದನು. ಸಂಬಂಧಿಕರು ಮತ್ತು ಗ್ರಾಮಸ್ಥರು ಪದೇ ಪದೇ ಮನವೊಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ, ಮನೆಯಿಂದ ವೃದ್ಧೆಯ ಎಲ್ಲಾ ಆಭರಣಗಳನ್ನು ತಂದು ಓಂ ಪ್ರಕಾಶ್ ಗೆ ಒಪ್ಪಿಸಲಾಯಿತು. ಇದಾದ ನಂತರ, ಆ ವ್ಯಕ್ತಿ ತಾಯಿಯ ದೇಹವನ್ನು ದಹನ ಮಾಡಲು ಅವಕಾಶ ಮಾಡಿಕೊಟ್ಟನು.

ತನ್ನ ತಾಯಿಯ ಸಾವಿನ ಬಗ್ಗೆ ಚಿಂತೆ ಮಾಡದ ಮಗ ಆಕೆಯ ಆಭರಣದ ಮೇಲೆ ಬಹಳ ಚಿಂತೆ ಇಟ್ಟುಕೊಂಡಿದ್ದ. ತನ್ನ ತಾಯಿಯ ಎಲ್ಲ ಆಭರಣ ತನಗೆ ಬೇಕು ಎಂದು ಹಠ ಸಾಧಿಸಿ ಕೊನೆಗೆ ಗೆದ್ದುಬಿಟ್ಟ. ಆದರೆ ಹಿರಿಯ ಮಗ ತಾಯಿಯ ಅಂತ್ಯಸಂಸ್ಕಾರವೇ ತನಗೆ ಮುಖ್ಯ ಎಂದು ಚಿನ್ನಾಭರಣ ಬಿಟ್ಟುಕೊಟ್ಟ. ಹಣ ಆಸ್ತಿಗಾಗಿ ಬಡಿದಾಡುವ ಮಕ್ಕಳು ಬೇಕೆ? ಎನ್ನುವ ಪ್ರಶ್ನೆಗಳು ಕೇಳಿ ಬಂದವು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ