ತೇಜಸ್ವಿ ಪ್ರತಿಷ್ಠಾನದಿಂದ ಕನ್ನಡ ಕೈಬರಹ ಸ್ಪರ್ಧೆ
ಕೊಟ್ಟಿಗೆಹಾರ: 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ (K.P.Poornachandra Tejaswi) ಪ್ರತಿಷ್ಠಾನದ ವತಿಯಿಂದ ತೇಜಸ್ವಿ ಅವರಿಗೊಂದು ಪತ್ರ–ಕನ್ನಡ ಕೈ ಬರಹ ಸ್ಪರ್ಧೆಗೆ ಕೈ ಬರಹವನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೈ ಬರಹ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಫರ್ಧಾರ್ಥಿಗಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರಿಗೆ ಕಾಲ್ಪನಿಕ ಪತ್ರವನ್ನು ತಮ್ಮ ಸ್ವಂತ ಕನ್ನಡ ಕೈ ಬರಹದಲ್ಲಿ ಬರೆಯಬೇಕು. 18 ವರ್ಷದೊಳಗಿನ ಸ್ಪರ್ಧಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು ಪತ್ರವನ್ನು A4 ಸೈಜಿನ ಹಾಳೆಯಲ್ಲಿ ಬರೆಯಬೇಕು. ಕೈ ಬರಹದ ಮೂಲ ಪ್ರತಿಯನ್ನೇ ಕಳುಹಿಸಬೇಕು. ಜೆರಾಕ್ಸ್ ಅಥವಾ ಪ್ರಿಂಟ್ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ . ಪತ್ರದೊಂದಿಗೆ ಪ್ರತ್ಯೇಕ ಹಾಳೆಯಲ್ಲಿ ಸ್ಪರ್ಧಿಗಳ ಪರಿಚಯ, ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದು ಆಧಾರ್ ಕಾರ್ಡ್ ನಕಲು, ಪಾಸ್ ಪೋರ್ಟ್ ಸೈಜಿನ ಭಾವಚಿತ್ರ ಮತ್ತು ಕೈ ಬರಹ ಸ್ಪರ್ಧಾರ್ಥಿಗಳದ್ದೇ ಎಂಬ ಕುರಿತ ಸ್ವಯಂ ಘೋಷಣಾ ಪತ್ರವನ್ನ ಲಗತ್ತಿಸಬೇಕು ಎಂದು ತಿಳಿಸಿದ್ದಾರೆ.
ಕೈ ಬರಹದ ಪತ್ರವನ್ನು ನವೆಂಬರ್ 20 ರೊಳಗೆ ತಲುಪುವಂತೇ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ (ರಿ), ಕೊಟ್ಟಿಗೆಹಾರ ಅಂಚೆ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ– 577113 ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಅತ್ಯುತ್ತಮ ಕೈ ಬರಹ ಮತ್ತು ಅತ್ಯುತ್ತಮ ಪತ್ರ ಎಂಬ ಎರಡು ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತದೆ.
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ಪ್ರಥಮ ಬಹುಮಾನ 5,000, ದ್ವಿತೀಯ ಬಹುಮಾನ 3,000, ತೃತೀಯ ಬಹುಮಾನ 2,000 ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ವಿಜೇತರ ಪಟ್ಟಿಯನ್ನು ನವೆಂಬರ್ 25 ರ ಸಂಜೆ 5 ಗಂಟೆಗೆ ತೇಜಸ್ವಿ ಪ್ರತಿಷ್ಠಾನದ ಅಧಿಕೃತ ಜಾಲತಾಣ @kpptrust ನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ 9663098873, 9449309067 ಗೆ ಸಂರ್ಪಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























