ಸಾವಿಗೆ ನಾನು ಹೆದರಲ್ಲ, ಇದೇ ವರ್ಷ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಣೆ - Mahanayaka

ಸಾವಿಗೆ ನಾನು ಹೆದರಲ್ಲ, ಇದೇ ವರ್ಷ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಣೆ

sheikh hasina
29/06/2026

ನವದೆಹಲಿ: “ನನಗೆ ಸಾವಿನ ಭಯವಿಲ್ಲ, ಇದೇ ವರ್ಷದ ಕೊನೆಯಲ್ಲಿ ನಾನು ಬಾಂಗ್ಲಾದೇಶಕ್ಕೆ ಮರಳಲಿದ್ದೇನೆ” ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಿಸಿದ್ದಾರೆ. 2024ರಲ್ಲಿ ತಮ್ಮ ಸರ್ಕಾರದ ಪತನದ ನಂತರ ಭಾರತದಲ್ಲಿ ಆಶ್ರಯ ಪಡೆದಿರುವ ಅವರು, ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ತಮ್ಮ ತಾಯ್ನಾಡಿಗೆ ಮರಳುವ ನಿರ್ಧಾರದ ಕುರಿತು ಮಾತನಾಡಿದ ಹಸೀನಾ, “ನನ್ನ ಮರಳುವಿಕೆ ಕೇವಲ ವೈಯಕ್ತಿಕ ಮಹತ್ವಾಕಾಂಕ್ಷೆಯಲ್ಲ. ಇದು ಬಾಂಗ್ಲಾದೇಶದ ಜನರ ರಾಜಕೀಯ ಹಕ್ಕುಗಳು, ಪ್ರಜಾಪ್ರಭುತ್ವದ ಮರುಸ್ಥಾಪನೆ, ಕಾನೂನಿನ ಆಡಳಿತ ಮತ್ತು ನಮ್ಮ ವಿಮೋಚನಾ ಯುದ್ಧದ ಆಶಯಗಳೊಂದಿಗೆ ಬೆಸೆದುಕೊಂಡಿದೆ” ಎಂದಿದ್ದಾರೆ.

ತಮಗೆ ಎದುರಾಗಿರುವ ಮರಣದಂಡನೆ ತೀರ್ಪು ಮತ್ತು ಕ್ರಿಮಿನಲ್ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು, “1975ರಲ್ಲಿ ನಾನು ನನ್ನ ಪೋಷಕರು, ಸಹೋದರರು ಮತ್ತು ಇಡೀ ಕುಟುಂಬವನ್ನು ಕಳೆದುಕೊಂಡೆ. ನನ್ನ ಮೇಲೆಯೂ ಗ್ರೆನೇಡ್ ದಾಳಿಗಳು ಸೇರಿದಂತೆ ಹಲವು ಕೊಲೆ ಯತ್ನಗಳು ಮತ್ತು ಸಂಚುಗಳು ನಡೆದಿವೆ. ಆದರೆ ಪ್ರತಿಬಾರಿಯೂ ನಾನು ಜನರಿಗಾಗಿ ಎದ್ದು ನಿಂತಿದ್ದೇನೆ. ಸದ್ಯದ ಕೋರ್ಟ್ ತೀರ್ಪುಗಳು ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ” ಎಂದು ತಳ್ಳಿಹಾಕಿದ್ದಾರೆ.

ಬಾಂಗ್ಲಾದೇಶದ ಪ್ರಸ್ತುತ ತಾರಿಕ್ ರಹಮಾನ್ ನೇತೃತ್ವದ ಬಿಎನ್‌ ಪಿ ಸರ್ಕಾರ ಮತ್ತು ಹಿಂದಿನ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದ ವಿರುದ್ಧ ಹಸೀನಾ ತೀವ್ರ ವಾಗ್ದಾಳಿ ನಡೆಸಿದರು. “ದೇಶದಲ್ಲಿ ಸದ್ಯ ಪ್ರಜಾಪ್ರಭುತ್ವವಾಗಲಿ, ಕಾನೂನಿನ ಆಡಳಿತವಾಗಲಿ ಇಲ್ಲ. ಆರ್ಥಿಕತೆ ದುರ್ಬಲಗೊಂಡಿದೆ, ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ ಮತ್ತು ಉಗ್ರಗಾಮಿ ಧೋರಣೆ ಹೆಚ್ಚಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶೇಖ್ ಹಸೀನಾ ಅವರ ಈ ಹೇಳಿಕೆ ಬಾಂಗ್ಲಾದೇಶದ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ಅಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಸೀನಾ ಅವರ ನಿಷೇಧಿತ ‘ಅವಾಮಿ ಲೀಗ್’ ಪಕ್ಷದ ಪ್ರಭಾವ ಮತ್ತೆ ಚಿಗುರುತ್ತಿದೆ ಎಂಬ ವದಂತಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.


Provided by
Provided by

ಪ್ರಧಾನಿ ಕಾರ್ಯಾಲಯದ ಮೂಲಗಳ ಪ್ರಕಾರ, “ಹಸೀನಾ ಅವರ ಹೇಳಿಕೆಗಳ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ಇದು ಕೇವಲ ನಮ್ಮ ಮೇಲೆ ಒತ್ತಡ ಹೇರಲು ಅವರು ಮಾಡುತ್ತಿರುವ ತಂತ್ರವಷ್ಟೇ. ಜನರು ನಮ್ಮೊಂದಿಗಿದ್ದಾರೆ” ಎಂದು ತಿಳಿಸಿದೆ.

ಬಿಎನ್‌ಪಿ ಮತ್ತು ಜಮಾತ್–ಎ–ಇಸ್ಲಾಮಿ ಪಕ್ಷದ ನಾಯಕರು ಹಸೀನಾ ಅವರಿಗೆ ದೇಶದಲ್ಲಿ ಬಾಕಿ ಇರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಮತ್ತು ಮರಣದಂಡನೆ ಶಿಕ್ಷೆಯನ್ನು ನೆನಪಿಸಿದ್ದು, ದೇಶಕ್ಕೆ ಮರಳಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ