ವೇಗದ ನಡಿಗೆ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಡಬದ ಪ್ರತಿಭಾನ್ವಿತ ವಿದ್ಯಾರ್ಥಿನಿ ಚೈತನ್ಯ
![kadaba](https://www.mahanayaka.in/wp-content/uploads/2023/12/kadaba.jpg)
ಕಡಬ: ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ 17ರ ವಯೋಮಾನದ ಬಾಲಕಿಯರ ಕ್ರೀಡಾಕೂಟದ 3 ಕಿ.ಮೀ. ವೇಗದ ನಡಿಗೆಯಲ್ಲಿ ಕಡಬ ತಾಲೂಕಿನ ನೂಜಿ ಬಾಳ್ತಿಲ ಬೆಥನಿ ಸಂಯಕ್ತ ಪದವಿ ಪೂರ್ವ ಕಾಲೇಜಿನ 9ನೇ ತರಗತಿಯ ವಿದ್ಯಾರ್ಥಿನಿ ಚೈತನ್ಯ ಅವರು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
2023ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ 3 ಕಿ.ಮೀ. ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟ, ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಚೈತನ್ಯ ಪ್ರಥಮ ಸ್ಥಾನ ಪಡೆದಿದ್ದರು.
2023—24ನೇ ಸಾಲಿನ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 3 ಕಿ.ಮೀ. ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ ಹಾಗೂ ಕರ್ನಾಟಕ ಅಥ್ಲೆಟಿಕ್ ಫೆಡರೇಶನ್ ವತಿಯಿಂದ ಸೆ.27ರಿಂದ 30ರವರೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಜ್ಯೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಥನಿ ಪ್ರೌಢಶಾಲೆ ನೂಜಿಬಾಳ್ತಿಲದ ವಿದ್ಯಾರ್ಥಿನಿ ಚೈತನ್ಯ 17 ವರ್ಷ ವಯೋಮಿತಿಯೊಳಗಿನ 3 ಕಿ.ಮೀ. ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ವಲಯ ಅಂತರ್ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಇದೀಗ ಡಿಸೆಂಬರ್ 2ರಿಂದ 4ರವರೆಗೆ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗ 17ರ ವಯೋಮಾನದ ಬಾಲಕಿಯರ ಕ್ರೀಡಾಕೂಟದಲ್ಲಿ 3 ಕಿ.ಮೀ. ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬೆಥನಿ ಪ್ರೌಢಶಾಲೆ ನೂಜಿಬಾಳ್ತಿಲ ಇಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಚೈತನ್ಯ ಇವರಿಗೆ ದೈಹಿಕ ಶಿಕ್ಷಕರಾದ ಪುನೀತ್ ಮತ್ತು ಮತ್ತಾಯಿ ಇವರು ತರಬೇತಿ ನೀಡಿದ್ದಾರೆ.
ಚೈತನ್ಯ ಅವರು ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ನಿವಾಸಿ ಕುಂಞಪ್ಪ ಮತ್ತು ಲಲಿತಾ ಇವರ ಸುಪುತ್ರಿಯಾಗಿದ್ದಾರೆ.