ಕೇಸರಿ ಪಾಳಯಕ್ಕೆ ಮಹಾ ಹಿನ್ನಡೆ: ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ಎಐಎಡಿಎಂಕೆ; 2024ರ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) ದಿಂದ ಹೊರನಡೆಯುವುದಾಗಿ ಎಐಎಡಿಎಂಕೆ ಘೋಷಿಸಿದೆ. 2024 ರ ಲೋಕಸಭಾ ಚುನಾವಣೆಗೆ ಪ್ರತ್ಯೇಕ ರಂಗವನ್ನು ಮುನ್ನಡೆಸುವುದಾಗಿ ಹೇಳಿದೆ.
ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎನ್ ಡಿಎಯಿಂದ ಹೊರಬರುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಮತ್ತು ಹಿರಿಯ ಮುಖಂಡ ಕೆ.ಪಿ.ಮುನುಸಾಮಿ, ಮುಂದಿನ ವರ್ಷದ ಚುನಾವಣೆಯಲ್ಲಿ ಎನ್ ಡಿಎಯಿಂದ ಬೇರ್ಪಡಲು ಮತ್ತು ಸಮಾನ ಮನಸ್ಕ ಪಕ್ಷಗಳ ಒಕ್ಕೂಟವನ್ನು ಬೆಂಬಲಿಸಲು ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಹೇಳಿದರು.
ಬಿಜೆಪಿಯ ತಮಿಳುನಾಡು ರಾಜ್ಯ ನಾಯಕತ್ವವು ಇತ್ತೀಚೆಗೆ ದ್ರಾವಿಡ ನಾಯಕ ದಿವಂಗತ ಸಿಎನ್ ಅಣ್ಣಾದೊರೈ ಮತ್ತು ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಅಪಮಾನ ಮಾಡಿ ಅವರ ನೀತಿಗಳನ್ನು ಟೀಕಿಸುತ್ತಿದೆ ಎಂದು ಎಐಎಡಿಎಂಕೆ ಪಕ್ಷವು ಯಾರನ್ನೂ ಹೆಸರಿಸದೆ ತನ್ನ ನಿರ್ಣಯ ಪ್ರಕಟಿಸಿದೆ. ಅಣ್ಣಾದೊರೈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರ ಹೇಳಿಕೆಗಳು ಈ ಎರಡು ಮಿತ್ರಪಕ್ಷಗಳ ನಡುವೆ ಬಿರುಕು ಮೂಡಿಸಿತ್ತು.
ಇನ್ನು ಎಐಎಡಿಎಂಕೆ ಸಭೆಯಲ್ಲಿ ಪಕ್ಷದ ಉನ್ನತ ಪದಾಧಿಕಾರಿಗಳು, ಜಿಲ್ಲಾ ಕಾರ್ಯದರ್ಶಿಗಳು, ಶಾಸಕರು ಮತ್ತು ಸಂಸದರು ಭಾಗವಹಿಸಿದ್ದರು. ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆದ ಸರ್ವಾನುಮತದ ನಿರ್ಧಾರವು ಎರಡು ಕೋಟಿಗೂ ಹೆಚ್ಚು ಪಕ್ಷದ ಕಾರ್ಯಕರ್ತರ ಭಾವನೆಗಳು ಮತ್ತು ಆಕಾಂಕ್ಷೆಗಳನ್ನು ಗೌರವಿಸುತ್ತದೆ ಎಂದು ಮುನ್ಸಾಮಿ ಹೇಳಿದರು.