ಪ್ರಧಾನಿ ಮೋದಿಗೆ ಯಾಕೆ ಜಾತಿ ಗಣತಿ ಭಯ..? ಕೇಂದ್ರ ಸರ್ಕಾರವು ದತ್ತಾಂಶವನ್ನು ಮರೆಮಾಚುತ್ತಿದೆ; ರಾಹುಲ್ ಗಾಂಧಿ ಗಂಭೀರ ಆರೋಪ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರವು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆಸಿದ ‘ಜಾತಿ ಜನಗಣತಿ’ಯ ವಿವರಗಳನ್ನು ಯಾಕೆ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಮೋದಿಯವರು ಅಂತಹ ಪ್ರಕ್ರಿಯೆಗೆ ಯಾಕೆ ಹೆದರುತ್ತಾರೆ ಎಂದು ಕೇಳಿದ್ದಾರೆ.
ಬಿಲಾಸ್ ಪುರದ ಪರ್ಸಾಡಾ (ಸಕ್ರಿ) ಗ್ರಾಮದಲ್ಲಿ ರಾಜ್ಯ ಸರ್ಕಾರದ ‘ಆವಾಸ್ ನ್ಯಾಯ್ ಸಮ್ಮೇಳನ’ವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಒತ್ತಡ ಹೇರಿದಾಗ ಬಡವರು ಮತ್ತು ನಿರ್ಗತಿಕರಿಗೆ ಲಾಭವಾಯಿತು. ಆದರೆ ಆಡಳಿತಾರೂಢ ಬಿಜೆಪಿ ಅದೇ ರೀತಿ ಮಾಡಿದಾಗ “ಅದಾನಿಗೆ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ಗುತ್ತಿಗೆಗಳು ಸಿಗುತ್ತವೆ” ಎಂದು ಹೇಳಿದರು.
ಕಾಂಗ್ರೆಸ್ ನಡೆಸಿದ ಜಾತಿ ಗಣತಿಯಲ್ಲಿ ದೇಶದ ಪ್ರತಿಯೊಂದು ಜಾತಿಯ ಜನಸಂಖ್ಯೆಯ ದಾಖಲೆ ಇದೆ.
ಕೇಂದ್ರ ಸರ್ಕಾರದ ಬಳಿ ಈ ವರದಿ ಇದೆ. ಆದರೆ ಮೋದಿಜಿ ಅದನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ. “ನಾವು ಇತರ ಹಿಂದುಳಿದ ವರ್ಗಗಳು, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಮಹಿಳೆಯರಿಗೆ ಅಭಿವೃದ್ದಿ ಕಾರ್ಯದಲ್ಲಿ ಭಾಗವಹಿಸಲು ಬಯಸಿದರೆ ಜಾತಿ ಗಣತಿ ನಡೆಸಬೇಕು. ಮೋದಿಜಿ ಜಾತಿ ಜನಗಣತಿ ನಡೆಸದಿದ್ದರೆ, ನಾವು ಅಧಿಕಾರಕ್ಕೆ ಆಯ್ಕೆಯಾದಾಗ ಒಬಿಸಿ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಜಾತಿ ಜನಗಣತಿ ನಡೆಸುವುದು ನಮ್ಮ ಮೊದಲ ಹೆಜ್ಜೆಯಾಗಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.