ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಸಾವು: ಸಾವಿನ ಸಂಖ್ಯೆ 16ಕ್ಕೆ ಏರಿಕೆ - Mahanayaka

ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಸಾವು: ಸಾವಿನ ಸಂಖ್ಯೆ 16ಕ್ಕೆ ಏರಿಕೆ

pataki
12/10/2023


Provided by

ಆನೇಕಲ್: ಅತ್ತಿಬೆಲೆ ಪಟಾಕಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮತ್ತೋರ್ವ ಯುವಕ ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಪಟಾಕಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಮೃತಪಟ್ಟವರಾಗಿದ್ದಾರೆ.

ವೆಂಕಟೇಶ್ ಅವರು ತನ್ನ ಸ್ನೇಹಿತನ ಜೊತೆಗೆ ಪಟಾಕಿ ಖರೀದಿಗೆ ಹೋಗಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿತ್ತು. ಗೋದಾಮಿನೊಳಗೆ ಸಿಲುಕಿದ್ದ  ಅವರ ಬೆನ್ನು, ತಲೆ, ಕೈ ಕಾಲುಗಳಿಗೆ ಬೆಂಕಿ ತಗುಲಿ ಗಂಭೀರ ಸುಟ್ಟ ಗಾಯಗಳಾಗಿದ್ದವು.

25 ವರ್ಷ ವಯಸ್ಸಿನ ವೆಂಕಟೇಶ್ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು. ಬಾಡಿ ಬಿಲ್ಡರ್ ಕೂಡ ಆಗಿದ್ದರು. ತನ್ನ ಪರಿಚಯಸ್ಥರ ಕಾರ್ಯಕ್ರಮಕ್ಕೆ ಪಟಾಕಿ ತರಲೆಂದು ಅವರು ತೆರಳಿದ್ದರು.  ಬುಧವಾರವಷ್ಟೇ ಪಟಾಕಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಮಿಳುನಾಡಿನ ಯುವಕ ದಿನೇಶ್ ಮೃತಪಟ್ಟಿದ್ದರು. ಇದೀಗ ವೆಂಕಟೇಶ್ ಕೂಡ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 16ಕ್ಕೆ ಏರಿದೆ.

ಇತ್ತೀಚಿನ ಸುದ್ದಿ