ನಾಯಿಗೆ ಬೈಯ್ಯುವಾಗ ಹುಷಾರ್..!:  ಪಕ್ಕದ ಮನೆಯ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ - Mahanayaka

ನಾಯಿಗೆ ಬೈಯ್ಯುವಾಗ ಹುಷಾರ್..!:  ಪಕ್ಕದ ಮನೆಯ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ

chikkamagaluru
05/12/2023


Provided by

ಚಿಕ್ಕಮಗಳೂರು: ಮನೆಯಲ್ಲಿ ನಾಯಿ ಬೊಗಳುತ್ತಿತ್ತು. ಹೀಗಾಗಿ ಮನೆಯ ಯಜಮಾನ ನಾಯಿಗೆ ಬೈದಿದ್ದಾನೆ. ಇದನ್ನು ತಪ್ಪಾಗಿ ಗ್ರಹಿಸಿದ ಪಕ್ಕದ ಮನೆಯ ವ್ಯಕ್ತಿ, ಈತ ತನಗೆ ಬೈಯ್ಯುತ್ತಿದ್ದಾನೆ ಎಂದು, ಜಗಳ ಆರಂಭಿಸಿದ್ದು, ನಾಯಿಯ ಯಜಮಾನನ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆಘಾತಕಾರಿ ಘಟನೆ ಚಿಕ್ಕಮಗಳೂರು  ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ.

ಸುಂದರ್ ರಾಜ್ ಎಂಬವರು ಆ್ಯಸಿಡ್ ದಾಳಿಗೊಳಗಾದ ವ್ಯಕ್ತಿಯಾಗಿದ್ದಾರೆ. ಪಕ್ಕದ ಮನೆಯ ನಿವಾಸಿ ಜೇಮ್ಸ್ ಹಾಗೂ ಆತನ ಪತ್ನಿ ಮರಿಯಮ್ಮ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು  ಈ ಬಗ್ಗೆ ನೀಡಲಾಗಿರುವ ದೂರಿನಲ್ಲಿ ಆರೋಪಿಸಲಾಗಿದೆ.

ತನ್ನ ಮನೆಯ ನಾಯಿ ಬೊಗಳುತ್ತಿತ್ತು. ಹೀಗಾಗಿ ಸುಂದರ್ ರಾಜ್ ನಾಯಿಗೆ ಬೈದಿದ್ದಾರೆ.  ಆದ್ರೆ,  ಸುಂದರ್ ರಾಜ್ ನಾಯಿಯ ನೆಪದಲ್ಲಿ ಪಕ್ಕದ ಮನೆಯ ವ್ಯಕ್ತಿಗೆ ಟಾಂಗ್ ಇಟ್ಟು ಬೈಯ್ಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಜೇಮ್ಸ್ ಜಗಳ ಆರಂಭಿಸಿದ್ದಾನೆ.  ಜಗಳ ವಿಕೋಪಕ್ಕೆ ತಿರುಗಿದ್ದು ಜೇಮ್ಸ್, ಸುಂದರ್ ರಾಜ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ.

ಸದ್ಯ ಗಾಯಾಳು ಸುಂದರ್ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಅವರ ಎಡಗಣ್ಣಿಗೆ ಗಂಭೀರವಾದ ಗಾಯಗಳಾಗಿವೆ. ಕಣ್ಣಿನ ಪದರವನ್ನು ಬದಲಿಸಬೇಕು ಎಂದು ವೈದ್ಯರು ಸೂಚನೆ ನೀಡಿದ್ದಾರೆ.

ಘಟನೆ ಸಂಬಂಧ  ಆರೋಪಿ ಜೇಮ್ಸ್ ವಿರುದ್ಧ ಎನ್.ಆರ್. ಪುರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ