ಹಿಂದೂ ವ್ಯಾಪಾರಿಗಳ ಜೊತೆ ಮಾತ್ರ ವ್ಯಾಪಾರ ಮಾಡಿ ಎಂಬ ಕರೆ: ಶರಣ್ ಪಂಪ್‌ ವೆಲ್‌ ವಿರುದ್ಧ ಕೇಸ್ ದಾಖಲು - Mahanayaka

ಹಿಂದೂ ವ್ಯಾಪಾರಿಗಳ ಜೊತೆ ಮಾತ್ರ ವ್ಯಾಪಾರ ಮಾಡಿ ಎಂಬ ಕರೆ: ಶರಣ್ ಪಂಪ್‌ ವೆಲ್‌ ವಿರುದ್ಧ ಕೇಸ್ ದಾಖಲು

sharan pompwel
18/10/2023


Provided by

ದಕ್ಷಿಣ ಕನ್ನಡ: ಹಿಂದೂಗಳು ಹಿಂದೂ ವ್ಯಾಪಾರಿಗಳ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎಂದು ಹೇಳಿಕೆ ನೀಡಿದ್ದ ವಿಶ್ವ ಹಿಂದೂ ಪರಿಷತ್‌ ನ ಮುಖಂಡ ಶರಣ್ ಪಂಪ್‌ವೆಲ್‌ ವಿರುದ್ಧ ಕೇಸ್ ದಾಖಲಾಗಿದೆ.

ಶರಣ್ ಪಂಪ್‌ ವೆಲ್ ಅವರು ತನ್ನ ಬೆಂಬಲಿಗರೊಂದಿಗೆ ಹೋಗಿ‌‌ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿರುವ ಹಿಂದೂ ವ್ಯಕ್ತಿಗಳ ಮಾರಾಟದ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ನೆಟ್ಟು ತದನಂತರ ಎಲ್ಲಾ ಹಿಂದೂಗಳು ತಮಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಹಿಂದೂ ಸಮುದಾಯದ ವ್ಯಾಪಾರಸ್ಥರ ಅಂಗಡಿಗಳಲ್ಲಿ ಮಾತ್ರ ಪಡೆದುಕೊಳ್ಳುವಂತೆ ಹೇಳಿಕೆ ನೀಡಿದ್ದರು.

ಈ ಕೃತ್ಯ ಹಾಗೂ ಪತ್ರಿಕಾಗೋಷ್ಠಿ ಭಿನ್ನಕೋಮಿನ ನಡುವೆ ಕೋಮು ಸಾಮರಸ್ಯಕ್ಕೆ ದಕ್ಕೆ ಉಂಟು ಮಾಡಿರುವುದಾಗಿರುತ್ತದೆ. ಹೀಗಾಗಿ ದಕ್ಷಿಣ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿ.ಎಸ್.ಐ ಮನೋಹರ್ ಪ್ರಸಾದ್ ಇವರ ದೂರಿನ ಮೇಲೆ ಶರಣ್ ಪಂಪ್‌ ವೆಲ್ ಹಾಗೂ ಇತರರ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜರಂಗದಳ ಖಂಡನೆ:

ಮಂಗಳಾದೇವಿ ದೇವಸ್ಥಾನದಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಮತ್ತು ದತ್ತಿಇಲಾಖೆಯ ಕಾನೂನಿನ ಪ್ರಕಾರ ದೇವಸ್ಥಾನದ ವಠಾರ ಮತ್ತು ರಥಬೀದಿಯಲ್ಲಿ ಹಿಂದುಯೇತರರಿಗೆ ಅವಕಾಶವಿಲ್ಲ. ಹೀಗಾಗಿ ಹಿಂದೂ ವ್ಯಾಪಾರಸ್ಥರ ಬೆಂಬಲಕ್ಕೆ ನಿಂತ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಮೇಲೆ ಮುಸ್ಲಿಮರ ಓಲೈಕೆಗೆ ಕೇಸು ದಾಖಲಿಸಿದ ಕಾಂಗ್ರೆಸ್ ರಾಜ್ಯಸರಕಾರದ ಹಿಂದೂ ವಿರೋಧಿ ನೀತಿಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ತಕ್ಷಣ ಹಾಕಿರುವ ಸುಳ್ಳುಕೇಸನ್ನು ಹಿಂದೆ ಪಡೆಯಬೇಕು. ಹಿಂದೂ ಸಂಘಟನೆಯ ನಾಯಕರನ್ನು ಧಮನಿಸಲು ಪ್ರಯತ್ನಿಸಿದರೆ ತಕ್ಕ ಉತ್ತರ ಕೊಡಲಾಗುವುದು ಎಂದು ಬಜರಂಗದಳ ವಿಭಾಗ ಸಹಸಂಯೋಜಕ್ ಪುನೀತ್ ಅತ್ತಾವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಇತ್ತೀಚಿನ ಸುದ್ದಿ