ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಾಶ ಆಗಿಲ್ಲ, ಅದರ ಸ್ವರೂಪ ಬದಲಾಗಿದೆ: ದಿನೇಶ್ ಹೆಗ್ಡೆ ಉಳೆಪಾಡಿ - Mahanayaka

ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಾಶ ಆಗಿಲ್ಲ, ಅದರ ಸ್ವರೂಪ ಬದಲಾಗಿದೆ: ದಿನೇಶ್ ಹೆಗ್ಡೆ ಉಳೆಪಾಡಿ

ambedkar jayanti bajpe
16/04/2025

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ -ಗ್ರಾಮ ಶಾಖೆ ಎಕ್ಕಾರು ಇದರ ವತಿಯಿಂದ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣಾ ಕಾರ್ಯಕ್ರಮವನ್ನು ಎಕ್ಕಾರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಸಲಾಯಿತು.

ಪ್ರಗತಿಪರ ಚಿಂತಕರೂ, ಖ್ಯಾತ ವಕೀಲರೂ ಆಗಿರುವ ದಿನೇಶ್ ಹೆಗ್ಡೆ ಉಳೆಪಾಡಿಯವರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ” ಅಂಬೇಡ್ಕರ್ ರವರು ವಿಶ್ವ ಕಂಡ ಬೆರಳೆಣಿಕೆಯ ನಾಯಕರಲ್ಲಿ ಪ್ರಮುಖರು. ತನ್ನ ಅಪಾರ ಜ್ಞಾನ, ವಿಧ್ವತ್ ನಿಂದಾಗಿ ಅವರು ವಿಶ್ವಜ್ಞಾನಿಯಾಗಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ ಬೆಳೆದು ಇಡೀ ವಿಶ್ವಕ್ಕೇ ನಮ್ಮ ದೇಶದ ಕೀರ್ತಿ ಪಾತಾಕೆಯನ್ನು ಹಾರಿಸಿದವರು. ಶಿಕ್ಷಣಕ್ಕೆ ಬಡತನವೆಂಬುವುದು ಅಡ್ಡಿಯಾಗಲಾರದು. ತನ್ನಲ್ಲಿ ಸಾಧಿಸುವ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುವುದನ್ನು ಜಗತ್ತಿಗೆ ತೋರಿಸಿಕೊಟ್ಟವರು. ತಾನು ಶೋಷಿತ ಸಮುದಾಯದಲ್ಲಿ ಹುಟ್ಟಿ, ಬಾಲ್ಯದಿಂದಲೇ ಮನುವಾದಿ ವ್ಯವಸ್ಥೆಯ ಶೋಷಣೆಯ ಕರಾಳತೆಯನ್ನು ಸ್ವತಃ ಅನುಭವಿಸಿದರೂ, ಸಂವಿಧಾನದಲ್ಲಿ ಎಲ್ಲಾ ಜಾತಿ, ಧರ್ಮಗಳಿಗೂ ಸಮಾನತೆಯನ್ನು ಕಲ್ಪಿಸಿಕೊಟ್ಟವರು. ಭಾರತದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಾಶ ಆಗಿಲ್ಲ, ಬದಲಾಗಿ ಅದು ಜೀವಂತವಾಗಿದೆ. ಆದರೆ ಅದರ ಸ್ವರೂಪ ಮಾತ್ರ ಬದಲಾಗಿದೆ. ನಮ್ಮನ್ನಾಳುವ ರಾಜಕೀಯ ಪಕ್ಷಗಳು ದಲಿತರನ್ನು ಕೇವಲ ಚುನಾವಣಾ ಓಟ್ ಬ್ಯಾಂಕ್ ಗಳಾಗಿ ಬಳಸುತ್ತಿವೆ. ಆದರೆ ಸಾಂವಿಧಾನಿಕವಾಗಿ ರಾಜಕೀಯ ಕ್ಷೇತ್ರಗಳಲ್ಲಿ ಅವರಿಗೆ ಉನ್ನತ ಸ್ಥಾನಮಾನವನ್ನು ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿಲ್ಲ ಎಂದರು.

ಶೋಷಿತ ಸಮುದಾಯವು ರಾಜಕೀಯವಾಗಿ ಜಾಗೃತರಾಗಿ ರಾಜಕೀಯ ಶಕ್ತಿಯಾದಾಗ ಮಾತ್ರ ಅಂಬೇಡ್ಕರ್ ರವರ ಸಂವಿಧಾನದ ಆಶಯಗಳು ಜಾರಿಯಾಗಲು ಸಾಧ್ಯ. ಅಂಬೇಡ್ಕರ್ ರವರು ಶಿಕ್ಷಣದಿಂದಲೇ ಎಲ್ಲವನ್ನು ಸಾಧಿಸಿದವರು. ವಿದ್ಯಾರ್ಥಿಗಳು ಅವರ ಜೀವನಗಾಥೆಯನ್ನು ತಿಳಿದು ಅವರಂತೆಯೇ ಶಿಕ್ಷಣ ಪಡೆದು ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದಾಗ ಮಾತ್ರ ಸಮ ಸಮಾಜವನ್ನು ಕಟ್ಟಲು ಸಾಧ್ಯ, ಭ್ರಷ್ಟಾಚಾರ ಎಂಬುವುದು ಭಾರತದ ಪ್ರಗತಿಯ ವೇಗಕ್ಕೆ ಕಡಿವಾಣ ಹಾಕುತ್ತಿದೆ. ನಾನು ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಂಥ:ಕರಣದಿಂದ ಆತ್ಮಸಾಕ್ಷಿಯಾಗಿ ಸ್ವಯಂ ನಿರ್ಧಾರ ಮಾಡಿಕೊಂಡರೆ ಮಾತ್ರ ಭ್ರಷ್ಟಾಚಾರವನ್ನು ಹಿಮ್ಮೆಟ್ಟಿಸಬಹುದು. ನಾವೆಲ್ಲರೂ ಇದಕ್ಕೆ ಬದ್ಧರಾಗಬೇಕು ಎಂದರು.


Provided by

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮುಖ್ಯ ಅತಿಥಿಯಾಗಿ ಮಾತನಾಡಿ “ಎಲ್ಲಾ ಸಮುದಾಯಗಳನ್ನು ಒಟ್ಟು ಸೇರಿಸಿ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಸಮಾಜದಲ್ಲಿರುವ ಜಾತಿ, ಧರ್ಮಗಳ ನಡುವಿನ ಅಂತರ ಕಡಿಮೆಯಾಗಿ ಸಹಬಾಳ್ವೆ ಬೆಳೆಯಲು ಸಾಧ್ಯ ಎಂದರು.

ಶೋಷಿತ ಸಮುದಾಯಗಳು ಉತ್ತಮ ಶಿಕ್ಷಣ ಪಡೆದು ಐ.ಎ.ಎಸ್, ಐ.ಪಿ.ಎಸ್. ಹುದ್ದೆಯನ್ನು ಅಲಂಕರಿಸಿ ಮುಂದಿನ ದಿನಗಳಲ್ಲಿ ಅವರೇ ಇಂತಹ ಕಾರ್ಯಕ್ರಮಗಳನ್ನು ಅವರೇ ಉದ್ಘಾಟಿಸುವ ಹಂತಕ್ಕೆ ತಲುಪಿದಾಗ ಮಾತ್ರ ಅಂಬೇಡ್ಕರ್ ರವರ ಕನಸು ನನಸಾಗಲು ಸಾಧ್ಯ ಎಂದರು.

ಸಂಘಟನೆಗಳು ದಲಿತ ಸಮುದಾಯಗಳ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ತಿಳಿದುಕೊಂಡು ಸರಕಾರದ ಗಮನಕ್ಕೆ ತರುವ ಕಾರ್ಯ ಮಾಡಬೇಕು ಎಂದರು.

ದ.ಸಂ.ಸ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ಮಾತನಾಡಿ “ಅಂಬೇಡ್ಕರ್ ರವರು ಇಡೀ ಜಗತ್ತಿಗೆ ಸಮಾನತೆಯ ಸಂದೇಶವನ್ನು ಹೇಳಿ ಕೊಟ್ಟವರು. ಅವರ ವಿಚಾರಧಾರೆಗಳು ಇಂದಿಗೂ ಹಾಗೂ ಮುಂದೆಯೂ ಪ್ರಸ್ತುತ. ಭಾರತವೆಂಬ ಮನುವಾದಿ ಜಾತಿ ವ್ಯವಸ್ಥೆಯ ಮಣ್ಣಿನಲ್ಲಿ ಅಂಬೇಡ್ಕರ್ ಹುಟ್ಟದೇ ಇರುತ್ತಿದ್ದರೆ ಇಂದಿಗೂ ದಲಿತರ ಪರಿಸ್ಥಿತಿ ಹೀನಾಯವಾಗಿರುತ್ತಿತ್ತು. ನಾವೆಲ್ಲಾ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅರಿತು ಜಾಗೃತರಾಗಿ, ಸಂಘಟಿತರಾಗಿ ಸಮತಾ ಸಮಾಜವನ್ನು ಕಟ್ಟಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಂಚಾಲಕರಾದ ಗಣೇಶ್ ಕೆಂಚಗುಡ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರೂ, ಮಾಜಿ ಶಾಸಕರೂ ಆಗಿರುವ ಕೆ.ಅಭಯಚಂದ್ರ ಜೈನ್, ದ.ಸಂ.ಸ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಮೋನಪ್ಪ ಶೆಟ್ಟಿ ಎಕ್ಕಾರು, ಕುಂಭಕಂಟಿಣಿ ದೈವಸ್ಥಾನ ಎಕ್ಕಾರು ಇದರ ಆಡಳಿತ ಮೊಕ್ತೇಸರರಾದ ನಿತಿನ್ ಹೆಗ್ಡೆ ಕಾವರ ಮನೆ ಎಕ್ಕಾರು, ಯುವ ಉದ್ಯಮಿ ರೊನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ, ಪರಿವರ್ತನಾ ಕೋ -ಆಪರೇಟಿವ್ ಸೊಸೈಟಿ (ರಿ)ಬಜ್ಪೆ ಇದರ ಅಧ್ಯಕ್ಷರಾದ ಕೃಷ್ಣಾನಂದ ಡಿ., ಪಿ. ಡಬ್ಲ್ಯೂ.ಡಿ. ಗುತ್ತಿಗೆದಾರ ವಿ.ಕಣ್ಣನ್., ದ.ಸಂ.ಸ. ತಾಲೂಕು ಸಂಚಾಲಕರಾದ ರಾಘವೇಂದ್ರ ಎಸ್. ಪೇಜಾವರ., ಲಯನ್ಸ್ ಕ್ಲಬ್ ಕಟೀಲು–ಎಕ್ಕಾರು ಇದರ ಅಧ್ಯಕ್ಷರಾದ ಶೇಖರ್ ಶೆಟ್ಟಿ ಎಕ್ಕಾರು, ದ.ಸಂ.ಸ. ಎಕ್ಕಾರು ಗ್ರಾಮ ಶಾಖೆಯ ಮಹಿಳಾ ಸಂಚಾಲಕಿ ಸೌಮ್ಯ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ರೋನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ (ಕೃಷಿ ಕ್ಷೇತ್ರದಲ್ಲಿ 2024 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ), ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ದೈವ ನರ್ತಕರಾದ ಹರಿಯಪ್ಪ ಬಂಗೇರ ಶಿಬರೂರು, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ರಘು ಕೆ. ಎಕ್ಕಾರು, ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಾದಸ್ವರ ವಾದಕ ನಾಗಪ್ಪ ಶೇರಿಗಾರ ಕೆಂಚಗುಡ್ಡೆ ಎಕ್ಕಾರು, ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಗೋಲ್ಡ್ ಮೆಡಲ್ ಪಡೆದಿರುವ ಕುಮಾರಿ ಶ್ರೇಯಾ ಜಿ.ಎಸ್. ಇವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯೊಂದಿಗೆ ಸನ್ಮಾನಿಸಲಾಯಿತು.

ಸ್ಥಳೀಯ ಅಂಗನವಾಡಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಾಪು ರಂಗತರಂಗ ಕಲಾವಿದರಿಂದ “ಕುಟ್ಯಣ್ಣನ ಕುಟುಂಬ ” ನಾಟಕವನ್ನು ಪ್ರದರ್ಶಿಸಲಾಯಿತು. ವಾಸು ಎಕ್ಕಾರು ಸ್ವಾಗತಿಸಿ, ಕೃಷ್ಣ ಕೆ. ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು. ರಘು ಕೆ. ಎಕ್ಕಾರು ಧನ್ಯವಾದ ಸಮರ್ಪಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ