ವಯನಾಡಿನ ಬದಲು ಹೈದರಾಬಾದ್ ನಿಂದ ಸ್ಪರ್ಧಿಸಿ: ರಾಹುಲ್ ಗಾಂಧಿಗೆ ಓವೈಸಿ ಸವಾಲು

ಹೈದರಾಬಾದ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಯನಾಡಿನ ಬದಲು ಹೈದರಾಬಾದ್ ನಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ಬಾಬರಿ ಮಸೀದಿಯನ್ನು ಕೆಡವಲಾಯಿತು ಎಂದರು.
ಕಾಂಗ್ರೆಸ್ ನಾಯಕರನ್ನುದ್ದೇಶಿಸಿ ಸವಾಲು ಹಾಕಿದ ಓವೈಸಿ, ನಿಮ್ಮ ನಾಯಕನಿಗೆ ವಯನಾಡಿನ ಬದಲು ಹೈದರಾಬಾದ್ ನಲ್ಲಿ ಚುನಾವಣೆ ಎದುರಿಸುವಂತೆ ನಾನು ಸವಾಲು ಹಾಕುತ್ತೇನೆ ಎಂದರು.
ನೀವು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತೀರಿ. ಅದರ ಬದಲು ಕಣಕ್ಕಿಳಿದು ನನ್ನ ವಿರುದ್ಧ ಸ್ಪರ್ಧಿಸಿ. ಕಾಂಗ್ರೆಸ್ ಆಡಳಿತದಲ್ಲಿಯೇ ಬಾಬ್ರಿ ಮಸೀದಿ ಮತ್ತು ಸೆಕ್ರೆಟರಿಯೇಟ್ ಮಸೀದಿಯನ್ನು ಕೆಡವಲಾಯಿತು ಎಂದು ಹೇಳಿದರು.
ತೆಲಂಗಾಣದಲ್ಲಿ ಬಿಜೆಪಿ, ಬಿಆರ್ಎಸ್ ಮತ್ತು ಎಐಎಂಐಎಂ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆ ಓವೈಸಿ ಅವರನ್ನು ಕೆರಳಿಸಿದ್ದು, ಇದೀಗ ರಾಹುಲ್ ಗಾಂಧಿಗೆ ಓವೈಸಿ ಬಹಿರಂಗ ಸವಾಲು ಹಾಕಿದ್ದಾರೆ.