ತೌಕ್ತೆ ಚಂಡಮಾರುತ:  ದೈತ್ಯ ಅಲೆಗಳ ಅಬ್ಬರಕ್ಕೆ ಬೃಹತ್ ಬಂಡೆಗಳು ಸಮುದ್ರಪಾಲು | ಮನೆಗಳಿಗೆ ನುಗ್ಗಿದ ನೀರು - Mahanayaka

ತೌಕ್ತೆ ಚಂಡಮಾರುತ:  ದೈತ್ಯ ಅಲೆಗಳ ಅಬ್ಬರಕ್ಕೆ ಬೃಹತ್ ಬಂಡೆಗಳು ಸಮುದ್ರಪಾಲು | ಮನೆಗಳಿಗೆ ನುಗ್ಗಿದ ನೀರು

tauktae cyclone
15/05/2021


Provided by

ಉಡುಪಿ: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕಾಪು, ಬೈಂದೂರು ಹಾಗೂ ಉಡುಪಿ ತಾಲೂಕಿನಲ್ಲಿ ಭಾರೀ ಕಡಲ್ಕೊರೆತ ಉಂಟಾಗಿದ್ದು, ಬೃಹತ್ ಅಲೆಗಳ ಅಬ್ಬರಕ್ಕೆ ದಂಡೆಯಲ್ಲಿದ್ದ ನೂರಾರು ಬೃಹತ್ ಬಂಡೆಗಳು ಸಮುದ್ರಪಾಲಾಗಿವೆ.

ಬೈಂದೂರು ತಾಲ್ಲೂಕಿನ ಮರವಂತೆ ತೀರದಲ್ಲಿರುವ ಕರಾವಳಿ ಮಾರ್ಗದ ಕಾಂಕ್ರಿಟ್‌ ರಸ್ತೆ ತುಂಡಾಗಿದೆ. ಸಮುದ್ರಕ್ಕೆ ತಾಗಿಕೊಂಡಿರುವ 500 ಮೀಟರ್ ಉದ್ದದ ಭೂಭಾಗ ಕೊಚ್ಚಿಹೋಗಿದೆ. ಇಬ್ಬರು ಮೀನುಗಾರಿಕಾ ಶೆಡ್‌ಗಳಿಗೆ ಹಾನಿಯಾಗಿದೆ. ಇಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುವ ಅಪಾಯವಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

ಕಿರಿಮಂಜೇಶ್ವರದ ಹೊಸಹಿತ್ಲು, ಉಪ್ಪುಂದದ ತಾರಾಪತಿ ಪ್ರದೇಶ, ಹೊಸಾಡಿನ ಕಂಚುಕೋಡು, ಶೀರೂರಿನ ದೊಂಬೆಯ ತೀರ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ಉಂಟಾಗಿದೆ ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಬೀಚ್‌ನಲ್ಲಿ ತೀರ ಪ್ರದೇಶಕ್ಕೆ ನೀರು ನುಗ್ಗಿದೆ. ಲೈಟ್‌ ಹೌಸ್‌ ನ ಬಂಡೆಗೆ ದೈತ್ಯ ಅಲೆಗಳು ಬಡಿಯುತ್ತಿವೆ. ತೀರದಲ್ಲಿದ್ದ ಹಲವು ಮನೆಗಳಿಗೆ ನೀರು ನುಗ್ಗಿದೆ. ಬಡಾ, ಉಚ್ಚಿಲ, ಪಡುಬಿದ್ರಿ, ನಡಿಪಟ್ನದಲ್ಲಿ ಕಡಲ್ಕೊರೆತ ಸಂಭವಿಸಿದೆ.

ಉಡುಪಿಯ ಮಲ್ಪೆ ಬೀಚ್‌ ನ ತೀರವನ್ನು ಸಮುದ್ರ ಆವರಿಸಿದೆ. ತೀರದಲ್ಲಿದ್ದ ನಾಡದೋಣಿಗಳನ್ನು ಕ್ರೇನ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಬಿರುಸಿನ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

ಇತ್ತೀಚಿನ ಸುದ್ದಿ