ಬಡ್ಡಿ ಹಣ ಕೊಡದ್ದಕ್ಕೆ ವ್ಯಾಘ್ರ: ಬಟ್ಟೆಯನ್ನು ಕಳಚಿ ನಗ್ನಗೊಳಿಸಿ ದಲಿತ ಮಹಿಳೆಗೆ ಮೂತ್ರ ಕುಡಿಸಿದ ದುರುಳರು; ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು - Mahanayaka
10:58 AM Wednesday 17 - December 2025

ಬಡ್ಡಿ ಹಣ ಕೊಡದ್ದಕ್ಕೆ ವ್ಯಾಘ್ರ: ಬಟ್ಟೆಯನ್ನು ಕಳಚಿ ನಗ್ನಗೊಳಿಸಿ ದಲಿತ ಮಹಿಳೆಗೆ ಮೂತ್ರ ಕುಡಿಸಿದ ದುರುಳರು; ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

25/09/2023

ಸಾಲ ತೆಗೆದು ಅದನ್ನು ಮರಳಿ ಕೊಟ್ಟಿದ್ದರೂ ಸಹ ಬಡ್ಡಿ ಹಣ ಕೊಡಲಿಲ್ಲವೆಂದು ದಲಿತ ಮಹಿಳೆಯ ಬಟ್ಟೆಯನ್ನು ಕಳಚಿ ನಗ್ನಗೊಳಿಸಿ ಹಲ್ಲೆ ನಡೆಸಿದ್ದಲ್ಲದೇ ಆಕೆಯ ಮುಖದ ಮೇಲೆ ಮೂತ್ರ ವಿಸರ್ಜಿಸಿ ಪೈಶಾಚಿಕತೆ ಮೆರೆದಿರುವ ಕೃತ್ಯ ಬಿಹಾರದ ಮೋಸಿಮ್‌ ಪುರ್ ಗ್ರಾಮದಲ್ಲಿ ನಡೆದಿದೆ.

ಆರೋಪಿ ಪ್ರಮೋದ್‌ ಸಿಂಗ್‌ ಎಂಬಾತನಿಂದ ಮಹಿಳೆಯ ಪತಿ 1500 ರೂ. ಸಾಲ ಪಡೆದಿದ್ದ. ಸಂಪೂರ್ಣ ಸಾಲವನ್ನು ಮರಳಿಸಿದ್ದರೂ ಸಹ ಬಡ್ಡಿ ಹಣಕ್ಕಾಗಿ ಪ್ರಮೋದ್‌ ಸಿಂಗ್‌ ಒತ್ತಾಯಿಸುತ್ತಿದ್ದ. ಆದರೆ ದಂಪತಿ ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಕುಪಿತನಾದ ಪ್ರಮೋದ್‌ ಸಿಂಗ್‌ ಮತ್ತು ಆತನ ಪುತ್ರ ಅಂಶು ತಮ್ಮ ನಾಲ್ವರು ಸಹಚರರ ಜೊತೆಗೆ ಸೇರಿ ಈ ದುಷ್ಕೃತ್ಯ ನಡೆಸಿದ್ದಾರೆ.

ಮಹಿಳೆಯು ಮನೆಯ ಬಳಿಯಿದ್ದ ಬೋರ್‌ ವೆಲ್‌ನಿಂದ ನೀರು ತರಲು ಹೋಗಿದ್ದರು. ಇದೇ ವೇಳೆ ಆಕೆಯ ಮೇಲೆರೆಗಿದ ಆರು ಮಂದಿ ಪಾತಕಿಗಳು ಆಕೆಯ ಬಟ್ಟೆ ಕಳಚಿ ವಿವಸ್ತ್ರಗೊಳಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆಕೆಗೆ ಮೂತ್ರವನ್ನೂ ಸಹ ಕುಡಿಸಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಆದರೆ ಎಷ್ಟು ಹೊತ್ತಾದರೂ ಮರಳಿ ಬಾರದ ಮಹಿಳೆಯನ್ನು ಹುಡುಕುತ್ತಾ ಕುಟುಂಬದವರು ಹೊರಟಾಗ ಆಕೆ ನಗ್ನಳಾಗಿ ಮನೆಗೆ ಓಡಿ ಬರುತ್ತಿರುವುದು ಕಂಡು ಬಂದಿತ್ತು. ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ