ಹೆಚ್ಚು ಗೋವುಗಳನ್ನು ಸಾಕಬೇಡಿ: ಒಂದೆಡೆ ಗೋರಕ್ಷಣೆ ಜಪ, ಮತ್ತೊಂದೆಡೆ ರೈತರಿಗೆ ಬರೆ - Mahanayaka
10:15 PM Sunday 15 - February 2026

ಹೆಚ್ಚು ಗೋವುಗಳನ್ನು ಸಾಕಬೇಡಿ: ಒಂದೆಡೆ ಗೋರಕ್ಷಣೆ ಜಪ, ಮತ್ತೊಂದೆಡೆ ರೈತರಿಗೆ ಬರೆ

govu
22/12/2022

ಚಾಮರಾಜನಗರ: ಹೈನುಗಾರಿಕೆಯಿಂದಲೇ ಜೀವನ ಕಟ್ಟಿಕೊಂಡು ಬದುಕು ಸುಂದರವಾಗಿಸಿಕೊಳ್ಳಿ ಎಂದು ಸರ್ಕಾರ ಪ್ರೋತ್ಸಾಹಿಸಿದರೇ ಅರಣ್ಯ ಇಲಾಖೆ ಮಾತ್ರ ಹೆಚ್ಚು ಹಸು-ಮೇಕೆ ಸಾಕಬೇಡಿ ಎಂದು ಸಾರ್ವಜನಿಕ ನೋಟಿಸ್ ಅಂಟಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ನಡೆದಿದೆ.

ಹೌದು…, ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಡವಟ್ಟಿನ ಸಲಹೆಯೊಂದನ್ನು ಕೊಟ್ಟಿದ್ದು ಅಗತ್ಯವಿರುವಷ್ಟು ಮಾತ್ರ ಹಸು-ಮೇಕೆ ಸಾಕಿ ಹೆಚ್ಚಿನವುಗಳನ್ನು ಬೇರೆಡೆಗೆ ಸಾಗಿಸಬೇಕು, ಜಾನುವಾರಗಳನ್ನು ಕಾಡಿಗೆ ಬಿಡುವುದರಿಂದ ಅರಣ್ಯ ನಾಶವಾಗುತ್ತಿದೆ ಎಂದು ಹೇಳಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಎರಡು ದಿನಗಳ ಕಾಲ ಟಿಆರ್ ತಂಡದವರು ಗೋಪಿನಾಥಂ ವಲಯಕ್ಕೆ ಭೇಟಿ ನೀಡಿದ್ದ ವೇಳೆ ಹೆಚ್ಚಿನ ದನಕರುಗಳು ಇದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಸಾಗುವಳಿಗೆ ಬೇಕಾದಷ್ಟು ಹಸು-ಮೇಕೆ ಇಟ್ಟುಕೊಂಡು ಉಳಿದವುಗಳನ್ನು ಬೇರೆಡೆಗೆ ಸಾಗಿಸಬೇಕು, ಅರಣ್ಯದೊಳಕ್ಕೆ ದನ-ಮೇಕೆ ಬಿಟ್ಟರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಖಂಡನೆ-ಆಕ್ರೋಶ: ಅರಣ್ಯ ಇಲಾಖೆ ಕೊಟ್ಟಿರುವ ಈ ನೋಟಿಸಿಗೆ ರೈತಸಂಘದ ಮುಖಂಡ ಹೊನ್ನೂರು ಪ್ರಕಾಶ್ ಆಕ್ರೋಶ ಹೊರಹಾಕಿದ್ದು ಅರಣ್ಯ ಇಲಾಖೆಯವರು ಕೇವಲ ಮರಗಳನ್ನೇ ತಿಂದು ಬದುತ್ತೇವೆ ಅನ್ನ ಬೇಡವೆಂದಲ್ಲಿ ಇನ್ಮುಂದೆ ನಾವು ಹಸು ಸಾಕುವುದಿಲ್ಲ, ಗೋರಕ್ಷಣೆ ಎಂದು ಸರ್ಕಾರ ಕಾಯ್ದೆ ಮಾಡಿದರೇ ಅರಣ್ಯ ಇಲಾಖೆ ಹಸುಗಳನ್ನೆ ಸಾಕಬೇಡಿ ಎನ್ನುತ್ತಿದೆ, ಕಾಡಂಚಿನ ಜನರು ಜಾನುವಾರುಗಳನ್ನು ಮೇಯಿಸಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಅರಣ್ಯ ಇಲಾಖೆ ಈ ನೋಟಿಸ್ ಕೊಟ್ಟಿದೆ. ಇನ್ನೊಂದು ವಾರದಲ್ಲಿ ನೋಟಿಸ್ ನ್ನು ಹಿಂಪಡೆಯದಿದ್ದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ಈ ವಿವಾದಾತ್ಮಕ ನೋಟಿಸಿನಿಂದ ಸ್ಥಳೀಯರು ಆಕ್ರೋಶ-ಆತಂಕ ಹೊರಹಾಕಿದ್ದು ಅಗತ್ಯ ಜಾನುವರುಗಳು-ಹೆಚ್ಚು ಜಾನುವಾರುಗಳು ಎಂಬ ನೀತಿ ಸ್ಥಳೀಯರನ್ನು ಕೆರಳುವಂತೆ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ