ಪ್ರತಿನಿತ್ಯ ಸರ್ಕಾರಿ ಶಾಲೆಯಲ್ಲೇ ಗಂಡ–ಹೆಂಡತಿ ಜಗಳ: ಶಿಕ್ಷಕನ ಪತ್ನಿಯ ರಂಪಾಟಕ್ಕೆ ಮಕ್ಕಳು, ಶಿಕ್ಷಕರು ಹರಸಾಹಸ!
ಕೊಪ್ಪ: ಸರ್ಕಾರಿ ಶಾಲೆಯೊಂದರ ಆವರಣವೇ ದಂಪತಿಯ ಕೌಟುಂಬಿಕ ಕಲಹದ ಅಖಾಡವಾಗಿ ಮಾರ್ಪಟ್ಟಿರುವ ವಿಚಿತ್ರ ಹಾಗೂ ಅಷ್ಟೇ ಬೇಸರ ತರಿಸುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕಲ್ಲುಗುಡ್ಡೆ ಪ್ರಾಥಮಿಕ ಶಾಲೆಯ ಶಿಕ್ಷಕ ರಮೇಶ್ ನಾಯ್ಕ್ ಹಾಗೂ ಅವರ ಪತ್ನಿ ಸುಶೀಲಾ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ಟಾಕ್ ವಾರ್ ನಡೆಯುತ್ತಿದೆ. ಮೂಲತಃ ಬಳ್ಳಾರಿ ಮೂಲದ ಶಿಕ್ಷಕ ರಮೇಶ್ ನಾಯ್ಕ್, ಕಳೆದ 6 ತಿಂಗಳ ಹಿಂದೆಯಷ್ಟೇ ಈ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಊರಿನಲ್ಲೇ ನೆಲೆಸಲು ಗ್ರಾಮಸ್ಥರೇ ಅವರಿಗೆ ಬಾಡಿಗೆ ಮನೆಯ ವ್ಯವಸ್ಥೆ ಮಾಡಿಕೊಟ್ಟಿದ್ದರು. ಶಾಲೆಯ ಸಮೀಪದಲ್ಲೇ ಇರುವ ಮನೆಯಿಂದ ದಿನವೂ ಮಗುವಿನೊಂದಿಗೆ ಶಾಲೆಗೆ ಆಗಮಿಸುವ ಪತ್ನಿ ಸುಶೀಲಾ, ಶಾಲೆಯ ಆವರಣ ಹಾಗೂ ತರಗತಿಯ ಬಳಿಯೇ ಗಂಡನ ಜೊತೆ ನಿತ್ಯವೂ ಜಗಳವಾಡುತ್ತಿದ್ದಾರೆ.
ಶಿಕ್ಷಕನ ಕೌಟುಂಬಿಕ ಜಗಳ ಶಾಲೆಯ ಆವರಣ ತಲುಪಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ತೀವ್ರ ಮುಜುಗರ ಮತ್ತು ಕಿರಿಕಿರಿ ಅನುಭವಿಸುವಂತಾಗಿದೆ. ಪತ್ನಿಯ ಈ ರಂಪಾಟದಿಂದಾಗಿ ಶಾಲೆಯ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಹಾಳಾಗಿದೆ.
ಶಾಲೆಯ ಆವರಣಕ್ಕೆ ಬಾರದಂತೆ ಶಿಕ್ಷಕ ಹಾಗೂ ಶಾಲಾ ಸಿಬ್ಬಂದಿ ಎಷ್ಟು ಮನವಿ ಮಾಡಿದರೂ ಸುಶೀಲಾ ಮಾತು ಕೇಳುತ್ತಿಲ್ಲ. ಈ ಹಿಂದೆ ಹಲವು ಬಾರಿ ಗ್ರಾಮಸ್ಥರು ಮಧ್ಯಪ್ರವೇಶಿಸಿ ಇಬ್ಬರ ನಡುವೆ ರಾಜಿ ಪಂಚಾಯಿತಿ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿದಿನ ಶಾಲೆಗೆ ಬಂದು ಗಲಾಟೆ ಮಾಡುವುದನ್ನು ಆಕೆ ಮುಂದುವರಿಸಿದ್ದು, ಸ್ಥಳೀಯರು ಹಾಗೂ ಶಾಲಾ ಮಂಡಳಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























