ಕೇರಳ ಸ್ಫೋಟಕ್ಕೆ ಕೋಮು ಬಣ್ಣ: ಯಡವಟ್ಟು ಮಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇಸ್ ಫೈಲ್
ಕೇರಳದ ಪ್ರಾರ್ಥನಾ ಸಭೆಯೊಂದರಲ್ಲಿ ನಡೆದ ಸ್ಫೋಟದ ಹಿಂದೆ ‘ಜಿಹಾದಿ’ಗಳು ಕೆಲಸ ಮಾಡಿವೆ ಎಂದು ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಕೇಂದ್ರ ಸರ್ಕಾರದ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳದ ಎರ್ನಾಕುಲಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಕ್ಟೋಬರ್ 29 ರ ರವಿವಾರ ಎರ್ನಾಕುಲಂ ಬಳಿ ನಡೆದ ʼಯೆಹೋವನ ಸಾಕ್ಷಿಗಳ್ʼ ಎಂಬ ಕ್ರೈಸ್ತ ಪಂಗಡದ ಧಾರ್ಮಿಕ ಕಾರ್ಯಕ್ರಮದಲ್ಲಿ ಸರಣಿ ಸ್ಫೋಟಗಳು ನಡೆದಿತ್ತು. ಇದೇ ವೇಳೆ ಮೂರು ಜನರು ಬಲಿಯಾಗಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಸ್ಪೋಟದ ಬಳಿಕ ಟ್ವೀಟ್ ಮಾಡಿದ್ದ ಸಚಿವ ಚಂದ್ರಶೇಖರ್ ಅವರು ‘ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೆಹಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ರೆ ಜಿಹಾದ್ಗಾಗಿ ಭಯೋತ್ಪಾದಕ ಹಮಾಸ್ ಮುಗ್ಧ ಕ್ರಿಶ್ಚಿಯನ್ನರ ಮೇಲೆ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ಉಂಟುಮಾಡುತ್ತಿವೆ’ ಎಂದು ಪೋಸ್ಟ್ ಮಾಡಿದ್ದರು.
ಅದಾಗಿ ಕೆಲವೇ ಗಂಟೆಗಳಲ್ಲಿ ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಸ್ಫೋಟಗಳ ಹೊಣೆಯನ್ನು ಹೊತ್ತುಕೊಂಡಿದ್ದು, ಪೊಲೀಸರಿಗೆ ಶರಣಾಗಿದ್ದ. ಸಚಿವ ಚಂದ್ರಶೇಖರ್ ವಿರುದ್ಧ ಐಪಿಎಸ್ ಸೆಕ್ಷನ್ 153 ಮತ್ತು 153-ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.




























