ಹನೂರಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು: ಗುಂಡ್ಲುಪೇಟೆಯಲ್ಲಿ ಹುಲಿ ದಾಳಿಗೆ 3 ಹಸು ಬಲಿ - Mahanayaka
11:21 AM Thursday 21 - August 2025

ಹನೂರಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು: ಗುಂಡ್ಲುಪೇಟೆಯಲ್ಲಿ ಹುಲಿ ದಾಳಿಗೆ 3 ಹಸು ಬಲಿ

gundlla pette
22/09/2023


Provided by

ಚಾಮರಾಜನಗರ: ಕಾಡಾನೆ ದಾಳಿಗೆ ಯುವಕನೋರ್ವ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಬೊಂಬೆಗಲ್ಲು ಪೋಡು ಎಂಬಲ್ಲಿ ನಡೆದಿದೆ.

ಹನೂರು ತಾಲೂಕಿನ ಕಡಕಲಕಿಂಡಿ ಪೋಡಿನ ನಾಗೇಶ್ (20) ಮೃತಪಟ್ಟಿರುವ ಸೋಲಿಗ ಯುವಕ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ವ್ಯಾಪ್ತಿಯ ಬೈಲೂರು ಅರಣ್ಯ ವಲಯದಲ್ಲಿ ಈ ಘಟನೆ ನಡೆದಿದೆ.

ಬಿಳಿಗಿರಿರಂಗನ ಬೆಟ್ಟದಿಂದ ಬರುತ್ತಿದ್ದಾಗ ಬೊಂಬೆಗಲ್ಲು ಪೋಡು ಸಮೀಪದಲ್ಲಿ ಏಕಾಏಕಿ ಆನೆ ದಾಳಿ ನಡೆಸಿ ಯುವಕನನ್ನು ತುಳಿದು ಹಾಕಿದೆ. ಸ್ಥಳಕ್ಕೆ ಬೈಲೂರು ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಹುಲಿ ದಾಳಿಗೆ ಮೂರು ಹಸು ಸಾವು:

ಮೇಯಲು ಬಿಟ್ಟಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಮೂರು ಹಸುಗಳನ್ನು ಬಲಿ ಪಡೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಮಲ್ಲಮ್ಮನಹುಂಡಿ ಗ್ರಾಮದಲ್ಲಿ ನಡೆದಿದೆ.

ಮಲ್ಲಮ್ಮನಹುಂಡಿ ಗ್ರಾಮದ ಗುರುಸಿದ್ದಪ್ಪ ಎಂಬವರಿಗೆ ಸೇರಿದ ಹಸುಗಳು ಇದಾಗಿವೆ. ಬೀಳು ಭೂಮಿಯಲ್ಲಿ ದನಗಳನ್ನು ಮೇಯಲು ಬಿಟ್ಟಿದ್ದ ವೇಳೆ ಹುಲಿಯೊಂದು ದಾಳಿ ಮಾಡಿ ಮೂರು ಹಸುಗಳನ್ನು ಕೊಂದು ಹಾಕಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಈ ದಾಳಿ ಪ್ರಕರಣ ನಡೆದಿದೆ.
ಸದ್ಯ, ಎಸಿಎಫ್ ರವೀಂದ್ರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಪರಿಹಾರದ ಭರವಸೆ ನೀಡಿದ್ದಾರೆ. ಹುಲಿ ಸೆರೆಗಾಗಿ ಬೋನನ್ನು ಕೂಡ ಇರಿಸಲಾಗಿದೆ.

ಇತ್ತೀಚಿನ ಸುದ್ದಿ