ಇಸ್ರೇಲ್ ಫೆಲೆಸ್ತೀನ್ ಯುದ್ಧ: ಮೂರನೇ ವಿಮಾನದಲ್ಲಿ ಭಾರತಕ್ಕೆ ಮರಳಿದ ಭಾರತೀಯರು

15/10/2023
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಯುದ್ಧ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಭಾರತೀಯರು ತವರಿಗೆ ಮರಳುತ್ತಿದ್ದಾರೆ. ಭಾರತ ಸರ್ಕಾರ ಪ್ರಾರಂಭಿಸಿರುವ ಆಪರೇಷನ್ ಅಜಯ್ ಕಾರ್ಯಾಚರಣೆಯ ಮೂರನೇ ವಿಮಾನವು 197 ಪ್ರಯಾಣಿಕರನ್ನು ಕರೆತಂದಿದೆ. ಇದೇ ವೇಳೆ ನಾಲ್ಕನೇ ವಿಮಾನ ಕಾರ್ಯಾಚರಣೆಗೆ ಸಿದ್ದವಾಗಿದೆ.
ಕೇಂದ್ರ ಸಚಿವ ಕುಶಾಲ್ ಕಿಶೋರ್ ಇಸ್ರೇಲ್ ನಿಂದ ತಾಯ್ನಾಡಿಗೆ ಮರಳಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವರು ಹಾಗೂ ಪ್ರಧಾನಿ ಮೋದಿ ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸಬಯಸುತ್ತೇನೆ ಎಂದಿರುವ ಕಿಶೋರ್, ಭಾರತೀಯರು ಇಸ್ರೇಲ್ನಿಂದ ಸುರಕ್ಷಿತವಾಗಿ ಮರಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಒಟ್ಟಾರೆ 18 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರು ವಾಪಸ್ ಮರಳಲು ನೋಂದಾಯಿಸಿಕೊಂಡಿದ್ದು, ಅಷ್ಟೂ ಮಂದಿಯನ್ನು ಆಪರೇಷನ್ ಅಜಯ್ ಮೂಲಕ ಕರೆತರುವುದಾಗಿ ಭಾರತ ಸರ್ಕಾರ ಘೋಷಿಸಿದೆ.