6 ತಿಂಗಳ ಬಳಿಕ ಮನೆ ಸೇರಿದ ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಅರ್ಚಕ !

ಚಿಕ್ಕಮಗಳೂರು: ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ 6 ತಿಂಗಳ ಬಳಿಕ ಪತ್ತೆಯಾಗಿರುವ ಘಟನೆ ಕಡೂರು ತಾಲೂಕಿನ ತಂಗಲಿ ಗ್ರಾಮದಲ್ಲಿ ನಡೆದಿದೆ.
ಜನವರಿ 28ರಂದು ಪ್ರಯಾಗ್ ರಾಜ್ ನಲ್ಲಿ ಕಡೂರು ತಾಲೂಕಿನ ತಂಗಲಿ ಗ್ರಾಮದ ನರಸಿಂಹಮೂರ್ತಿ ಎಂಬವರು ನಾಪತ್ತೆಯಾಗಿದ್ದರು.
ತಂಗಲಿ ಗ್ರಾಮದ ಚನ್ನಕೇಶವ ಸ್ವಾಮಿ ದೇವಾಲಯದ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ತಮ್ಮ ಪುತ್ರ ಬದರೀನಾಥ್ ಜೊತೆ ಕುಟುಂಬ ಸಮೇತ ಕುಂಭ ಮೇಳಕ್ಕೆ ಹೋಗಿದ್ದರು. ಈ ವೇಳೆ ಜನಜಂಗುಲಿ ನಡುವೆ ಅವರು ನಾಪತ್ತೆಯಾಗಿದ್ದು, ಕುಟುಂಬಸ್ಥರು ನಾಲ್ಕೈದು ದಿನ ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ.
ಇದೇ ವೇಳೆ ಪುತ್ರ ಬದರೀನಾಥ್ ತಮ್ಮ ಕುಟುಂಬವನ್ನು ಊರಿನಲ್ಲಿ ಬಿಟ್ಟು ಮತ್ತೆ, ಪ್ರಯಾಗ್ ರಾಜ್ ಗೆ ತೆರಳಿ ಹುಡುಕಾಟ ನಡೆಸಿದ್ದರೂ ಅವರ ಸುಳಿವು ದೊರಕಿರಲಿಲ್ಲ. ಹೀಗಾಗಿ ನಿರಾಸೆಯಿಂದ ಮನೆಗೆ ತೆರಳಿದ್ದರು.
ಇದೀಗ 6 ತಿಂಗಳ ಬಳಿಕ ನಾಪತ್ತೆಯಾಗಿದ್ದ ನರಸಿಂಹಮೂರ್ತಿ ಮನೆಗೆ ತಲುಪಿದ್ದಾರೆ. ಕುಟುಂಬದಿಂದ ತಪ್ಪಿಸಿಕೊಂಡ ನಂತರ ಅವರು ಮುಂಬೈನ ಶಾರದಾ ರಿಹ್ಯಾಬಿಲಿಟೇಷನ್ ಸಂಸ್ಥೆಯ ಆಶ್ರಯದಲ್ಲಿದ್ದರು.
ಶಾರದಾ ಸಂಸ್ಥೆಯವರು ಊರಿಗೆ ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದು, ಮಾನವೀಯತೆ ಮೆರೆದಿದ್ದಾರೆ. ಕಳೆದ ಆರು ತಿಂಗಳುಗಳಿಂದ ನಾಪತ್ತೆಯಾಗಿದ್ದ ನರಸಿಂಹಮೂರ್ತಿ ಮೂರ್ತಿಯವರನ್ನು ಕಂಡು ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: