ರೈಲು ದುರಂತದಲ್ಲಿ 13 ಮಂದಿ ಸಾವು ಪ್ರಕರಣ: ರೈಲು ಅಪಘಾತಕ್ಕೆ ಟೀ ಮಾರುವವನೇ ಕಾರಣವಂತೆ! - Mahanayaka
7:06 AM Thursday 13 - February 2025

ರೈಲು ದುರಂತದಲ್ಲಿ 13 ಮಂದಿ ಸಾವು ಪ್ರಕರಣ: ರೈಲು ಅಪಘಾತಕ್ಕೆ ಟೀ ಮಾರುವವನೇ ಕಾರಣವಂತೆ!

24/01/2025

ಮಹಾರಾಷ್ಟ್ರದ ಜಲಗಾಂವ್ ನಲ್ಲಿ ರೈಲು ದುರಂತ ಸಂಭವಿಸಿ 13 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ರೈಲು ಅಪಘಾತಕ್ಕೆ ಟೀ ಮಾರುವವನೇ ಕಾರಣ. ಆತನಿಂದಲೇ 13 ಮಂದಿ ಬಲಿಯಾಗಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ. ಅವಘಡದಲ್ಲಿ ರೈಲ್ವೆಯಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಪುಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಟೀ ಮಾರುವವನಿಂದಲೇ ಜಲಗಾಂವ್ ರೈಲು ದುರಂತ ಸಂಭವಿಸಿದೆ. ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ಯಾಂಟ್ರಿಯಿಂದ ಬಂದ ಟೀ ಮಾರುವವನೊಬ್ಬ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ಕೂಗಿದ್ದಾನೆ. ಇದನ್ನು ಕೇಳಿಸಿಕೊಂಡ ಉತ್ತರ ಪ್ರದೇಶದ ಶ್ರಾವಸ್ತಿಯ ಮೂಲದ ಇಬ್ಬರು ಅಲ್ಲಿದ್ದ ಇತರರಿಗೂ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ತಮ್ಮ ರಕ್ಷಣೆಗಾಗಿ ರೈಲಿನ ಅಲಾರಾಂ ಚೈನ್‌ನ್ನು ಎಳೆದು ರೈಲನ್ನು ನಿಲ್ಲಿಸಿದ್ದಾರೆ ಎಂದರು.

ಬಳಿಕ ರೈಲಿನಿಂದ ಇಳಿದ ಪ್ರಯಾಣಿಕರು ಪಕ್ಕದ ರೈಲು ಹಳಿಯ ಮೇಲೆ ನಿಂತಿದ್ದಾರೆ. ಇದೇ ವೇಳೆ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರು ನಿಂತಿದ್ದ ಹಳಿಯ ಮೇಲೆ ಬಂದಿದೆ. ಪರಿಣಾಮ ಹಳಿಯ ಮೇಲಿಂದ ಇಳಿಯದೇ ಅಲ್ಲೇ ನಿಂತಿದ್ದವರ ಪೈಕಿ 13 ಮಂದಿ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ. ಬೆಂಕಿಯಿಂದಾಗಿ ಅಪಘಾತ ಸಂಭವಿಸಿದೆ ಎನ್ನುವುದು ಸುಳ್ಳು, ಸದ್ಯ ಮೃತರ ಪೈಕಿ 10 ಜನರನ್ನು ಗುರುತಿಸಲಾಗಿದೆ ಎಂದು ಹೇಳಿದರು.

ರೈಲ್ವೆ ಇಲಾಖೆ ಮೃತರ ಕುಟಂಬಸ್ಥರಿಗೆ 1.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. 4.45ಕ್ಕೆ ಪುಷ್ಪಕ್ ಎಕ್ಸ್‌ಪ್ರೆಸ್‌ ನಿಂತ 20 ನಿಮಿಷಗಳ ಬಳಿಕ 5.05ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್‌ ಬಂದಿದೆ. ಆದರೆ ಜನರು ಹಳಿ ಬಿಟ್ಟು ಕದಲದ ಕಾರಣ ದುರಂತ ಆಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟೀಕರಣ ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ