RCB ಗೆಲುವು — ಅತಿರೇಕದ ಅಭಿಮಾನ ಕರ್ನಾಟಕಕ್ಕೆ ಸೂತಕ

- ದಮ್ಮಪ್ರಿಯ ಬೆಂಗಳೂರು
ಕಳೆದ 17 ವರ್ಷಗಳಿಂದ “ಈ ಬಾರಿ ಕಪ್ ನಮ್ಮದೇ” ಎನ್ನುತ್ತಿದ್ದ ಕನ್ನಡಿಗರಿಗೆ ಕೊನೆಗೂ RCB ತಂಡ ಕಪ್ ನಮ್ಮದಾಗಿಸಿದೆ ಎನ್ನುವ ಸಂತಸವನ್ನು ಕರ್ನಾಟಕ ಜನತೆ ವ್ಯಕ್ತಪಡಿಸಿದ್ದಾರೆ.
ಇಂತಹ ಸಂತೋಷ ಇಡೀ ನಾಡಿಗೆ ಹೆಮ್ಮೆ ಎನಿಸಬೇಕೆ ಹೊರತು ಸೂತಕದ ವಾತಾವರಣವನ್ನು ನಿರ್ಮಾಣ ಮಾಡುವಂತಾಗಬಾರದು. RCB ಗೆಲುವಿನಿಂದ ಕರ್ನಾಟಕದಲ್ಲಿನ ಎಷ್ಟು ಜನರಿಗೆ ಲಾಭವಾಗಿದೆ ಅಥವಾ ಎಷ್ಟು ಅನುಕೂಲವಾಗಿದೆ ಎಂದು ಯೋಚಿಸುವುದಕ್ಕಿಂತ, ಇಡೀ ನಾಡಿನಲ್ಲಿ ಯುವ ಜನತೆಯ ಮನದಾಳದಲ್ಲಿ ಹುಚ್ಚೆದ್ದು ಕುಣಿಯುವ ಮನಸ್ಥಿತಿಯನ್ನು ಸೃಷ್ಟಿಸಿದೆ. ಇಂದು ಕೆಲವರ ಸಾವಿಗೆ ಕಾರಣವಾಗಿ ಇಡೀ ನಾಡು ಸಂಭ್ರಮಾಚರಣೆಯನ್ನು ಆಚರಿಸುವ ಬದಲು ಸೂತಕದ ವಾತಾವರಣದಲ್ಲಿ ಮೌನಾಚರಣೆ ಮಾಡುವಂತಾಗಿದೆ.
ಕ್ರಿಕೆಟ್ ಪ್ರಾರಂಭವಾಗುವ ಮುಂದಿನ ದಿನಗಳು ಒಂದು ರೀತಿಯ ಲಾಭದಾಯಕ ದಂದೆಯ ವ್ಯವಹಾರಿಕ ದಿನಗಳಾದರೆ, ಗೆದ್ದ ನಂತರ ಮತ್ತೊಂದು ರೀತಿಯ ಲಾಭದಾಯಕವನ್ನು ನಿರೀಕ್ಷಿಸುವ ಒಂದು ಮೆಂಟಲ್ ಗೇಮ್ ಎಂದರೆ ತಪ್ಪಾಗಲಾರದೇನೋ. ಕ್ರಿಕೆಟ್ ಪ್ರಾರಂಭಕ್ಕೂ ಮುನ್ನ ಟೀ ಶರ್ಟ್ ಗಳ ದಂಧೆ, ವಿವಿಧ ಕಾಸ್ಟ್ಯೂಮ್ ಗಳ ದಂಧೆ, ಹಲವಾರು ಸಿನಿಮಾ ಥಿಯೇಟರ್ ಗಳ ಬುಕಿಂಗ್ ದಂಧೆ, ಗೆಲುವು ಸೋಲುಗಳ ನಡುವಿನ ಬೆಟ್ಟಿಂಗ್ ದಂಧೆ, ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ವ್ಯಾಪಾರಗಳ ದಂಧೆ, ನೇರ ಪ್ರಸಾರ ವೀಕ್ಷಿಸುವ ಜನರ ವಿಮಾನ ಟಿಕೇಟ್ ದರದಲ್ಲಿ ದಂಧೆ, ಹೋಟೆಲ್ ಬುಕಿಂಗ್ ದಂಧೆ ಇವೆಲ್ಲಾ ಒಂದು ಕಡೆಯಾದರೆ, ಗೆದ್ದ ನಂತರ ಮುಖ್ಯಬೀದಿಗಳಲ್ಲಿ ಮೆರವಣಿಗೆ, ಪೊಲೀಸ್ ಇಲಾಖೆಯ ಸಮಯ ವ್ಯರ್ಥ, ಸಾಮಾನ್ಯ ಜನರ ಸಂಚಾರಕ್ಕೆ ಅಡೆತಡೆ, ಹೊಸ ಹೊಸ ಕಟೌಟ್ ಗಳ ನಿರ್ಮಾಣ, ಸಂಭ್ರಮಾಚರಣೆಯ ಆಚರಣೆಗಳು ಇವೆಲ್ಲವೂ ಮತ್ತೊಂದು ರೀತಿಯ ದಂಧೆಗಳು ಎಂದರು ತಪ್ಪಾಗಲಾರದು.
ಎಲ್ಲರಿಗೂ ಅವರ ನಾಡಿನ ಬಗ್ಗೆ ಅಭಿಮಾನ ಇದ್ದೇ ಇರುತ್ತದೆ. ಅದು ಅಭಿಮಾನವಾಗಿರಬೇಕೆ ಹೊರತು ಹುಚ್ಚು ಅಭಿಮಾನವಾಗಿ ಅತಿರೇಕಕ್ಕೆ ಹೋಗಬಾರದು, ಈಗ ಸತ್ತವರ ಕುಟುಂಬಕ್ಕೆ ಬಿಸಿಸಿ ಯಾಗಲಿ ಕರ್ನಾಟಕ ಸರ್ಕಾರವಾಗಲಿ, ವಿರಾಟ್ ಕೊಹ್ಲಿಯಂತಹ ಪ್ರಮುಖ ಆಟಗಾರರಾಗಲಿ, ಪೂರ್ಣ ಪ್ರಮಾಣದ ಕುಟುಂಬ ನಿರ್ವಹಣೆ ನಿರ್ವಹಿಸಲು ಸಾಧ್ಯವೇ ? ಅವರನ್ನು ಹೋಗಿ ಸಾಯಿ ಎಂದು ಹೇಳಿದವರು ಯಾರೂ ಎನ್ನುವುದು ಕೆಲವರ ಪ್ರಶ್ನೆ !! ನಿಜ ಆದರೆ ಆಯೋಜಿಸುವವರು ಇದರ ಬಗ್ಗೆ ಕಿಂಚಿತ್ತು ಯೋಚಿಸಬೇಕಿತ್ತಲ್ಲವೇ ? ಹಾಗಾಗಿ ಇಂತಹ ಸಂಭ್ರಮಾಚರಣೆಯನ್ನು ಅವರವರ ಮನೆಗಳಲ್ಲಿ ನಡೆಸುವುದು ಬಹಳ ಸೂಕ್ತವಾಗಿದೆ. ಆರ್ಸಿಬಿ ಗೆದ್ದ ತಕ್ಷಣ ಪಟಾಕಿಗಳ ಸುರಿಮಳೆಯನ್ನ ಸುರಿಸಿದ್ದು ಒಂದು ಸಂಭ್ರಮಾಚರಣೆಯಾದ ಮೇಲೆ ಮತ್ತೊಂದು ಕಾರ್ಯಕ್ರಮವನ್ನು ರೂಪಿಸುವ ಅಗತ್ಯವಾದರೂ ಏನಿತ್ತು ? ಕರ್ನಾಟಕ ಸರ್ಕಾರಕ್ಕೆ ಮತ್ತು ಜನತೆಗೆ ಬಹಳ ಹೆಮ್ಮೆಯ ವಿಚಾರ ಎನಿಸಿದ ಮೇಲೆ ಈ ರೀತಿಯ ಸೂತಕದ ಛಾಯೆಯಿಂದ ನಾಡಿನ ಜನತೆಯ ಕೆಲವು ಕುಟುಂಬಗಳು ಗೆದ್ದ ಆಟಗಾರರಿಗೆ ಹೊದಿಸಿದ ವಸ್ತ್ರದಲ್ಲಿ ಸಾವಿನ ಕಣ್ಣೀರನ್ನು ಒರೆಸಿಕೊಳ್ಳುವ ಅಗತ್ಯವಾದರೂ ಏನಿತ್ತು.
ದೇಶ ಕಾಯುವ ಯೋಧ ದೇಶಕ್ಕಾಗಿ ಯುದ್ಧವನ್ನು ಗೆದ್ದು , ಗಡಿಯಿಂದ ಬಂದಾಗ ಈ ರೀತಿಯ ಸಂಭ್ರಮಾಚರಣೆ ಅಗತ್ಯ, ಕ್ರೀಡೆಯನ್ನ ಕೇವಲ ಕ್ರೀಡೆಯಾಗಿಯೇ ನೋಡಬೇಕು, ಕ್ರೀಡೆಯಂತೆಯೇ ಅದನ್ನು ಸ್ವೀಕರಿಸಬೇಕು, ಕನ್ನಡ ನಾಡಿಗೆ ಕನ್ನಡ ಭಾಷೆಗೂ ತನ್ನದೇ ಆದ ಹೆಮ್ಮೆ ಅಂದಿನಿಂದಲೂ ಇದ್ದೇ ಇದೆ. ಅದು ಕೇವಲ ನಮ್ಮೊಳಗಿನ ಒಂದು ರಾಜ್ಯದ ಮೇಲೆ ನಮ್ಮ ರಾಜ್ಯದ ಕ್ರಿಕೆಟ್ ತಂಡಕ್ಕೆ ಗೆಲುವಾದ ತಕ್ಷಣಕ್ಕೆ ನಾಡಿನ ಬದಲಾವಣೆಯಲ್ಲಿ ಯಾವುದೇ ಏರಿಳಿತಗಳಾಗುವುದಿಲ್ಲ. ಅಂದ ಮಾತ್ರಕ್ಕೆ ಇಷ್ಟೊಂದು ಸಂಭ್ರಮಾಚರಣೆ ನಡೆಸಿ ಸಾವಿನ ಕೂಪಕ್ಕೆ ಕೆಲವು ಕುಟುಂಬಗಳನ್ನು ತಳ್ಳುವ ಅಗತ್ಯವಾದರೂ ಏನಿತ್ತು ? ಸತ್ತವರು ತನ್ನ ಕುಟುಂಬ ತ್ಯಜಿಸಿ ಹೋದರು, ಮುಂದೆ ಅವರ ಕುಟುಂಬಗಳ ಪರಿಸ್ಥಿತಿಯನ್ನು ಕ್ರಿಕೆಟ್ ನಡೆಸಿದ ಉದ್ದಿಮೆದಾರರು ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸಲು ಸಾಧ್ಯವೇ ? ಈ ರಾಜ್ಯ ರಾಜ್ಯಗಳ ಕ್ರಿಕೆಟ್ ಪಂದ್ಯಾವಳಿಗಳು ಸಹ ಕೇವಲ ಉದ್ದಿಮೆದಾರರು, ಬಂಡವಾಳಗಾರರು ಇವುಗಳನ್ನು ಕೇವಲ ಮೋಜು ಮಸ್ತಿಯ ಆಟಗಳಾಗಿ ಸ್ವೀಕರಿಸುತ್ತಾರೆಯೇ ಹೊರತು, ಇವರಂತೆ ಹುಚ್ಚು ಅಭಿಮಾನಿಗಳಲ್ಲ, ಆ ಕ್ಷಣದ ಅಭಿಮಾನಿಗಳು ಅಷ್ಟೇ,!! ಇವರನ್ನು ನಾಡಿನ ದೇಶದ ಅಭಿವೃದ್ಧಿಯ ಸೂಚಕವಾಗಿ ನೋಡಲು ಸಾಧ್ಯವೇ ? ಒಮ್ಮೆ ಯೋಚಿಸಿ!! ಕ್ರಿಕೆಟ್ ಪ್ರೇಮಿಗಳು ತಮ್ಮ ಮಕ್ಕಳನ್ನು ಉತ್ತಮ ಕ್ರಿಕೆಟಿಗರನ್ನಾಗಿ ಮಾಡಲು ಸಾಕಷ್ಟು ಪ್ರಯತ್ನ ಮಾಡುವುದನ್ನು ನಾವು ಗಮನಿಸುತ್ತೇವೆ. ಕೊನೆಗೆ ಇವರುಗಳು ಕೇವಲ ತನ್ನ ಕುಟುಂಬ ತನ್ನ ಬದುಕಿಗೆ ಸೀಮಿತವಾಗಿ ಯಾವುದೋ ಕಂಪನಿಗಳ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆಯೇ ಹೊರತು ದೇಶದಲ್ಲಿನ ಬಡತನ ನಿರ್ಮೂಲನೆಗೆ, ನಿರುದ್ಯೋಗ ನಿವಾರಣೆಗೆ, ದೇಶದಲ್ಲಿ ನಡೆಯುವ ದೌರ್ಜನ್ಯಗಳ ತಡೆಗೆ ಎಂದೂ ತಲೆ ಹಾಕುವುದಿಲ್ಲ. ರೈತರ ಆತ್ಮಹತ್ಯೆ, ಮಹಿಳೆಯ ಮೇಲಿನ ಅತ್ಯಾಚಾರ, ಇವುಗಳ ಬಗ್ಗೆ ಎಂದೂ ಮಾತನಾಡದ ಇವರುಗಳು, ದೇಶ ಆರ್ಥಿಕವಾಗಿ ಅಪಾಯದ ಅಂಚಿನಲ್ಲಿದೆ ಎಂದಾಗ ಮಾತ್ರ ಕೇವಲ ಭಾಷಣಕಾರರಾಗಿ ಮಾಧ್ಯಮಗಳ ಮುಂದೆ ಬಂದು ನಿಲ್ಲುತ್ತಾರೆ. ಹೀಗಿರುವಾಗ ಇವರ ಆಗಮನಕ್ಕೆ ಇವರ ನಿರ್ಗಮನಕ್ಕೆ ಇವರ ಸೋಲಿಗೆ ಇವರ ಗೆಲುವಿಗೆ ಇವರ ಪ್ರಚೋದನೆಗೆ ಅಭಿಮಾನಿಗಳು ಪ್ರಾಣತ್ಯಾಗ ಮಾಡುವುದಾದರೂ ಏತಕ್ಕೆ ಎನ್ನುವುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ !!!
ಇನ್ನಾದರೂ ಅರ್ಥ ಮಾಡಿಕೊಳ್ಳಿ , ಸತ್ತವರ ಕುಟುಂಬಕ್ಕೆ ಅವರದೇ ಆದ ಬದುಕಿನ ಚಿತ್ರಣಗಳಿರುತ್ತವೆ. ಸುಂದರ ಬದುಕನ್ನು ಇಂತಹ ಸಣ್ಣಪುಟ್ಟ ಹುಚ್ಚು ಅಭಿಮಾನದಿಂದ ಇಡೀ ಕುಟುಂಬದ ಜೀವನವನ್ನ ಬೀದಿ ಪಾಲು ಮಾಡದೆ ಇರುವುದು ಈ ಸಂದರ್ಭಕ್ಕೆ ಬಹಳ ಸೂಕ್ತ ಸಲಹೆ ಎನ್ನುವುದು ಕೆಲವರ ಅಭಿಪ್ರಾಯ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: