ಮುಷ್ಕರ ಮಾಡಿ ಕೆಎಸ್ಸಾರ್ಟಿಸಿಯನ್ನೂ ಖಾಸಗೀಕರಣ ಮಾಡುವಂತೆ ಮಾಡಬೇಡಿ | ಸಾರಿಗೆ ನೌಕರರಿಗೆ ಸಂಸದ ಪ್ರತಾಪ್ ಎಚ್ಚರಿಕೆ - Mahanayaka

ಮುಷ್ಕರ ಮಾಡಿ ಕೆಎಸ್ಸಾರ್ಟಿಸಿಯನ್ನೂ ಖಾಸಗೀಕರಣ ಮಾಡುವಂತೆ ಮಾಡಬೇಡಿ | ಸಾರಿಗೆ ನೌಕರರಿಗೆ ಸಂಸದ ಪ್ರತಾಪ್ ಎಚ್ಚರಿಕೆ

prathap simha
08/04/2021


Provided by

ಮೈಸೂರು: ಸಾರಿಗೆ ನೌಕರರ ಮುಷ್ಕರ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಗೆ ಟಾಂಗ್ ನೀಡಿದ್ದು, ರೈತರನ್ನು ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಕೆಎಸ್ಸಾರ್ಟಿಸಿ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ನೌಕರರು ಅವರ(ಕೋಡಿಹಳ್ಳಿ)ನ್ನು ತಮ್ಮ ನಾಯಕ ಎಂದು ಮಾಡಿಕೊಂಡದ್ದೇ ತಪ್ಪು. ಇದರಿಂದಾಗಿ ನೌಕರರು ದಾರಿ ತಪ್ಪಿದ್ದಾರೆ ಎಂದು ಪ್ರತಾಪ್ ಹೇಳಿದರು.

ಪ್ರೊ. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಂಡರು, ಹೋರಾಟದ ಬಗ್ಗೆ ಗೌರವವಿತ್ತು. ಅವರಿಬ್ಬರು ಅಸ್ತಂಗತ ಆದ ನಂತರ ಈಗ ಅಂತಹ ಮುಖ ಆ ಹೋರಾಟದಲ್ಲಿ ಇಲ್ಲ ಎಂದು ಹೇಳಿದ್ದಾರೆ.

ನಾವು ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಆಗುತ್ತಿದೆ. ಕೆಎಸ್ಸಾರ್ಟಿಸಿ ನೌಕರರು ರಾಜ್ಯ ಸರ್ಕಾರ ಸಂಕಷ್ಟದಲ್ಲಿ ಇರುವಾಗ ಈ ರೀತಿ ಹೋರಾಟಕ್ಕೆ ಇಳಿಯುವುದು ತಪ್ಪು. ಇದು ಮುಂದುವರಿದರೆ ಜನರೇ ಈ ವಿಭಾಗದಲ್ಲೂ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನ ಈ ರೀತಿ ಧ್ವನಿ ಎತ್ತುವಂತೆ ಮಾಡಬೇಡಿ ಎಂದು ಎಚ್ಚರಿಸಿದ ಪ್ರತಾಪ್,  ಜಾಸ್ತಿ ಕೆಲಸ ಮಾಡುವ ನಿಮ್ಮ ಮೇಲೆ ಜನ ಪ್ರೀತಿ ಇಟ್ಟಿದ್ದಾರೆ. ಆ ಪ್ರೀತಿ ಕಳೆದು ಕೊಳ್ಳಬೇಡಿ. ಎಸ್ಮಾ ಜಾರಿ ಮಾಡಿ ಬಲವಂತವಾಗಿ ಕೆಲಸಕ್ಕೆ ಹಾಜರಾಗುವಂತಹ ಪರಿಸ್ಥಿತಿ ತಂದು ಕೊಳ್ಳಬೇಡಿ ಎಂದು ಬೆದರಿಸಿದರು.

ಇದನ್ನೂ ಓದಿ:

ಕೆಎಸ್ಸಾರ್ಟಿಸಿಯ ಬಳಿಗೂ ಸುಳಿಯಿತು ಖಾಸಗೀಕರಣದ ವಾಸನೆ!?

ಇತ್ತೀಚಿನ ಸುದ್ದಿ