ವೇಣೂರು: ಪರಿಶಿಷ್ಟ ಸಮುದಾಯಕ್ಕೆ ರುದ್ರಭೂಮಿ ಮಂಜೂರಾತಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಶೇಖರ್ ವಿ.ಜಿ. ಮನವಿ - Mahanayaka
5:20 PM Tuesday 8 - September 2026

ವೇಣೂರು: ಪರಿಶಿಷ್ಟ ಸಮುದಾಯಕ್ಕೆ ರುದ್ರಭೂಮಿ ಮಂಜೂರಾತಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಶೇಖರ್ ವಿ.ಜಿ. ಮನವಿ

belthangady.jpg
22/08/2026

ವೇಣೂರು: ವೇಣೂರು ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ಮೀಸಲಾದ ರುದ್ರಭೂಮಿ ಜಾಗವನ್ನು ತಕ್ಷಣವೇ ಗುರುತಿಸಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಸಾಮಾಜಿಕ ಚಿಂತಕ ಶೇಖರ್ ವಿ.ಜಿ. ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಪಂಚಾಯತ್ನ ನೇತ್ರಾವತಿ ಸಭಾಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಪರಿಶೀಲನಾ ಸಭೆಯಲ್ಲಿ ಅವರು ಈ ಕುರಿತು ವಿನಂತಿಸಿದರು.

ವೇಣೂರು ಗ್ರಾಮದ ಜನತಾ ಕಾಲನಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸುಮಾರು 85ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. 1998–99ನೇ ಸಾಲಿನಲ್ಲಿ ಸರ್ವೇ ನಂಬರ್ 143/1A (LND (3) CR: 637/98–99) ರಲ್ಲಿ ಒಟ್ಟು 4.28 ಎಕರೆ ಜಾಗದ ಪೈಕಿ 1.27 ಎಕರೆ ಹಿಂದೂ ರುದ್ರಭೂಮಿ, 0.64 ಎಕರೆ ಪರಿಶಿಷ್ಟ ಪಂಗಡದ ರುದ್ರಭೂಮಿ ಹಾಗೂ 0.58 ಎಕರೆ ಪರಿಶಿಷ್ಟ ಜಾತಿಯ ರುದ್ರಭೂಮಿ ಉದ್ದೇಶಕ್ಕಾಗಿ ವೇಣೂರು ಗ್ರಾಮ ಪಂಚಾಯತ್ ಹೆಸರಿನಲ್ಲಿ ಷರತ್ತುಗಳಿಗೆ ಒಳಪಟ್ಟು ಜಾಗ ಮಂಜೂರು ಮಾಡಲಾಗಿತ್ತು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಆದರೆ, ಈ ಜಾಗದ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ವೇಣೂರು ಗ್ರಾಮ ಕರಣಿಕರು ಇಲ್ಲಿ ಯಾವುದೇ ಸರ್ಕಾರಿ ಜಾಗ ಖಾಲಿ ಇಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಶೇಖರ್ ವಿ.ಜಿ. ಆರೋಪಿಸಿದ್ದಾರೆ. ಗ್ರಾಮ ಸಭೆಯಲ್ಲಿಯೂ ಈ ಬೇಡಿಕೆಗೆ ಸೂಕ್ತ ನಿರ್ಣಯ ಕೈಗೊಳ್ಳದೆ ಇರುವುದಕ್ಕೆ ಪರಿಶಿಷ್ಟ ಸಮುದಾಯದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೇ ನಂಬರ್ 143/1Aಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಸ್ಥಳ ತನಿಖೆ ನಡೆಸಿ, ಪರಿಶಿಷ್ಟ ಸಮುದಾಯಕ್ಕೆ ಮೀಸಲಾದ ರುದ್ರಭೂಮಿಯನ್ನು ಶೀಘ್ರವೇ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಲಾಗಿದೆ.
ಗ್ರಾಮ ಸಭೆಗಳಲ್ಲಿಯೂ ಈ ಬೇಡಿಕೆಯನ್ನು ಹಲವು ಬಾರಿ ಮಂಡಿಸಿದರೂ ಸೂಕ್ತ ನಿರ್ಣಯ ಕೈಗೊಳ್ಳಲಾಗಿಲ್ಲ. ಪರಿಶಿಷ್ಟ ಸಮುದಾಯದ ನ್ಯಾಯಯುತ ಮನವಿಗೆ ಸ್ಪಂದಿಸದಿರುವ ಸ್ಥಳೀಯ ಆಡಳಿತದ ಧೋರಣೆಗೆ ಸಮುದಾಯದ ಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿಗಳಿಗೆ ಮಾಡಿದ ಮನವಿ

ಸರ್ವೇ ನಂಬರ್ 143/1A ಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು, ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು ಹಾಗೂ ಪರಿಶಿಷ್ಟ ಸಮುದಾಯಕ್ಕೆ ಕಾಯ್ದಿರಿಸಲಾದ ರುದ್ರಭೂಮಿಯ ಜಾಗವನ್ನು ಶೀಘ್ರವೇ ಗುರುತಿಸಿ ಗಡಿ ನಿಗದಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi