ತೇಜಸ್ವಿ ಪ್ರತಿಷ್ಠಾನದಲ್ಲಿ ಜನಮನ ಸೂರೆಗೊಂಡ ಆಕಾಶ ವೀಕ್ಷಣೆ - Mahanayaka
3:56 AM Wednesday 12 - November 2025

ತೇಜಸ್ವಿ ಪ್ರತಿಷ್ಠಾನದಲ್ಲಿ ಜನಮನ ಸೂರೆಗೊಂಡ ಆಕಾಶ ವೀಕ್ಷಣೆ

kotige hara
07/02/2024

ಕೊಟ್ಟಿಗೆಹಾರ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಮಂಗಳವಾರ ರಾತ್ರಿ ನಡೆದ ನಕ್ಷತ್ರ ವೀಕ್ಷಣೆ ಜನಮನ ಸೂರೆಗೊಂಡಿತು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಚಿಕ್ಕಮಗಳೂರಿನ ಜಿಲ್ಲಾ ವಿಜ್ಞಾನ ಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಾಸನ, ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ ಸೇರಿದಂತೇ ವಿವಿಧೆಡೆಯಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಆಗಮಿಸಿ ಆಕಾಶ ವೀಕ್ಷಣೆ ಮಾಡಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ ವೈಜ್ಞಾನಿಕ ಮನೋಭಾವದಿಂದ ಎಲ್ಲವನ್ನೂ ನೋಡುತಿದ್ದವರು ತೇಜಸ್ವಿ. ವಿಜ್ಞಾನಕ್ಕೆ ಇರುವ ನಿಖರತೆ ತೇಜಸ್ವಿ ಅವರ ಬರಹದಲ್ಲೂ ಇತ್ತು. ತೇಜಸ್ವಿ ಪ್ರತಿಷ್ಠಾನ ಹಲವಾರು ಕಾರ್ಯಕ್ರಮಗಳ ಮೂಲಕ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಲೇಖಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಟ್ರಸ್ಠಿಗಳಾದ ಪ್ರದೀಪ್ ಕೆಂಜಿಗೆ ಅವರು ಮಾತನಾಡಿ ಆಕಾಶ ವೀಕ್ಷಣೆಯಂತಹ ಕಾರ್ಯಕ್ರಮಗಳು ತೇಜಸ್ವಿ ಅವರ ಚಿಂತನೆಗೆ ಪೂರಕವಾಗಿದೆ. ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪಾತ್ರ ಅಪಾರವಾದದ್ದು ಎಂದರು.

ಮಂಡ್ಯ ಜಿಲ್ಲಾ ವಿಜ್ಞಾನ ವೇದಿಕೆಯ ಲೋಕೇಶ ಎಸ್ ಮಾತನಾಡಿ, ಅಂತರಂಗದ ಶುದ್ದಿಗೆ ಆಕಾಶ ವೀಕ್ಷಣೆ ಪೂರಕವಾಗಿದೆ. ಆಕಾಶಕಾಯಗಳ ಕೌತುಕಮಯ ಜಗತ್ತು ಬೆರಗು ಮೂಡಿಸುತ್ತದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಅಂತರಿಕ್ಷದ ಆಕಾಶಕಾಯಗಳ, ಪ್ರಪಂಚದ ವಿಸ್ಮಯಗಳ ಜ್ಞಾನದ ಅಭಾವವನ್ನು ನೀಗಿಸಲು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕಿದೆ ಎಂದರು.

ಮಂಡ್ಯ ಜಿಲ್ಲಾ ವಿಜ್ಞಾನ ವೇದಿಕೆಯ ಲೋಕೇಶ್ ಎಸ್ ಮತ್ತು ನಂಜರಾಜ್ ಸಿ.ಎಲ್ ಅವರು ಸುಮಾರು ೫೦ ಆಕಾಶಕಾಯಗಳ ಕುರಿತು ವರ್ಣಮಯ ಚಿತ್ರಪಟಗಳೊಂದಿಗೆ ವಿವರಣೆ ನೀಡಿದರು. ಮೇಷ, ವೃಷಭ, ಮಿಥುನ, ಸಿಂಹ, ಮಹಾವ್ಯಾಧ, ವಿಜಯಸಾರಥಿ, ಅರಿದ್ರ, ರಿಗಲ್, ಲುಬ್ದಕ, ಕಪೆಲ್ಲಾ, ರೋಹಿಣಿ, ಏಡಿ ನಿಹಾರಿಕೆ, ಕೃತಿಕ ನಕ್ಷತ್ರ ಗುಚ್ಚ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ದೂರದರ್ಶಕದ ಮೂಲಕ ಗುರು ಗ್ರಹವನ್ನು ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ವಿಜ್ಞಾನ ವೇದಿಕೆಯ ನಂಜರಾಜ್ ಸಿ.ಎಲ್, ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಅಧ್ಯಕ್ಷ ಎ.ಎನ್.ಮಹೇಶ್, ಉಪಾಧ್ಯಕ್ಷ ಓಂಕಾರಪ್ಪ, ಟಿ.ಜಿ.ಕೆ ಅರಸ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಕಲಾವಿದರಾದ ಸುರೇಶ್ಚಂದ್ರ ದತ್ತ, ವಸ್ತು ಸಂಗ್ರಹಕಾರ ಅಶೋಕ್, ಲೇಖಕ ಪೂರ್ಣೇಶ್ ಮತ್ತಾವರ, ಕೀಟ ತಜ್ಞ ಅವಿನಾಶ್ ಮೂಡಿಗೆರೆ, ಗಾಯಕ ಜಯಪಾಲ್ ಹೊಸಳ್ಳಿ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ಇತ್ತೀಚಿನ ಸುದ್ದಿ