ಉಡುಪಿ: ತಾಯಿ-ಮಕ್ಕಳ ಹತ್ಯೆ ಪ್ರಕರಣ | ಆರೋಪಿ ವಿವಾಹಿತ ವ್ಯಕ್ತಿ, ಮಾಜಿ ಪೊಲೀಸ್ ಸಿಬ್ಬಂದಿ

ಉಡುಪಿ: ನೇಜಾರಿನಲ್ಲಿ ತಾಯಿ ಮತ್ತು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ. ತಾಯಿ ಮಕ್ಕಳನ್ನು ತಾನೇ ಕೊಂದಿರೋದಾಗಿ ಆತ ಒಪ್ಪಿಕೊಂಡಿದ್ದಾನೆ.
ಮಂಗಳೂರು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ ಮೆಂಬರ್ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ್ ಗೆ ಗಗನಸಖಿ ಐನಾಝ್ ನ ಪರಿಚಯವಿತ್ತು. ಯಾವುದೋ ಕಾರಣಕ್ಕೆ ಸಂಬಂಧಿಸಿದಂತೆ ಆಕೆಯ ಮೇಲೆ ದ್ವೇಷ ಮೂಡಿದೆ. ಹೀಗಾಗಿ ಆಕೆಯನ್ನು ಕೊಲೆ ಮಾಡಲು ಉಡುಪಿಯ ತೃಪ್ತಿ ಲೇಔಟ್ ಗೆ ಬಂದಿದ್ದಾನೆ.
ಮನೆಗೆ ನುಗ್ಗಿದ ಪ್ರವೀಣ್, ಐನಾಝ್ ಳನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ತಾಯಿ ಹಾಗೂ ಇಬ್ಬರು ಮಕ್ಕಳು ಆತನನ್ನು ತಡೆಯಲು ಮುಂದಾಗಿದ್ದಾರೆ. ಹೀಗಾಗಿ ಅವರನ್ನು ಕೂಡ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಪ್ರವೀಣ್ ಅರುಣ್ ಚೌಗಲೆ ವಿವಾಹಿತ ವ್ಯಕ್ತಿಯಾಗಿದ್ದಾನೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವನಾಗಿದ್ದಾನೆ. ಹಲವು ವರ್ಷಗಳಿಂದ ಮಂಗಳೂರಿನಲ್ಲಿ ವಾಸಿಸುತ್ತಿದ್ದಾನೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಆಯುಕ್ತ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಆರೋಪಿ ಪೂನದ ಮಾಜಿ ಪೊಲೀಸ್ ಸಿಬ್ಬಂದಿ!:
ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಪೂನ ದ ಮಾಜಿ ಪೊಲೀಸ್ ಸಿಬ್ಬಂದಿಯಾಗಿದ್ದು, ಮೂರು ತಿಂಗಳು ಪೊಲೀಸ್ ಇಲಾಖೆಯಲ್ಲಿದ್ದ. ಮೂರು ತಿಂಗಳಲ್ಲೇ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ ಬಳಿಕ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸ ಪಡೆದ್ದಾನೆ. ಏರ್ ಇಂಡಿಯಾ ಕ್ರ್ಯೂ ನಲ್ಲಿ ಒಂದು ದಶಕದಿಂದ ಕೆಲಸ ಮಾಡುತ್ತಿದ್ದ.
ನವೆಂಬರ್ 12ರಂದು ನೇಜಾರಿನ ತೃಪ್ತಿ ಲೇಔಟ್ ನ ಮನೆಗೆ ನುಗ್ಗಿದ್ದ ಪ್ರವೀಣ್ ಹಸೀನಾ(48), ಮಕ್ಕಳಾದ ಅಫ್ನಾನ್(23), ಅಯ್ನಾಝ್(20) ಮತ್ತು ಅಸೀಮ್ ಎಂಬವರನ್ನು ಚೂರಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದ. ಘಟನೆ ವೇಳೆ ಮನೆಯಲ್ಲೇ ಇದ್ದ ಹಸೀನಾ ಅವರ ಅತ್ತೆಗೂ ಹಂತಕ ಚೂರಿಯಿಂದ ಹೊಟ್ಟೆಗೆ ಇರಿದಿದ್ದ. ಆದ್ರೆ ಅವರು ಆತನಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ಹೋಗಿ ಚಿಲಕ ಹಾಕಿಕೊಂಡಿದ್ದರಿಂದಾಗಿ ಅವರ ಪ್ರಾಣ ಉಳಿದಿತ್ತು.