ಡಿಜಿಟಲ್‌ ಮಾಧ್ಯಮ ಸ್ಥಾಪಿಸಲು 5 ಲಕ್ಷ ಸಹಾಯ ಧನ: ಈಗಲೇ  ಅರ್ಜಿ ಸಲ್ಲಿಸಿ - Mahanayaka

ಡಿಜಿಟಲ್‌ ಮಾಧ್ಯಮ ಸ್ಥಾಪಿಸಲು 5 ಲಕ್ಷ ಸಹಾಯ ಧನ: ಈಗಲೇ  ಅರ್ಜಿ ಸಲ್ಲಿಸಿ

digital media
19/12/2023

2023-24ನೇ ಸಾಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾಯೋಜನೆಯಡಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಜಿಲ್ಲಾ/ತಾಲ್ಲೂಕು  ಮಟ್ಟದಲ್ಲಿ ಉದ್ದಿಮೆಯನ್ನು ಸ್ಥಾಪಿಸಲು ಘಟಕ ವೆಚ್ಚದ ಶೇ.70ರಷ್ಟು ಅಥವಾ ರೂ.5 ಲಕ್ಷಗಳ ಸಹಾಯಧನವನ್ನು ಪಡೆಯಲು (ಉಳಿದ ಘಟಕ ವೆಚ್ಚ ಬ್ಯಾಂಕಿನಿಂದ ಪಡೆಯುವುದು) ಅರ್ಜಿ ಆಹ್ವಾನಿಸಲಾಗಿದೆ.


Provided by

ಅರ್ಜಿ ಸಲ್ಲಿಸಲು (ಯೂಟ್ಯೂಬ್ ಚಾನೆಲ್, ಸೋಶಿಯಲ್ ಮೀಡಿಯಾ ನ್ಯೂಸ್ ಪೇಜಸ್, ನ್ಯೂಸ್ ಓನ್‍ಲೈನ್ ಬ್ಲಾಗ್, ನ್ಯೂಸ್ ಕಂಟೆಂಟ್ ಕ್ರಿಯೇಶನ್, ವೆಬ್ ಪೇಜಸ್, ಓನ್‍ಲೈನ್ ಜರ್ನಲಿಸಂ, ಮೀಡಿಯಾ ರಿಲೇಟೆಡ್ ಟ್ರೈನಿಂಗ್) ಅರ್ಹ ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಸಲ್ಲಿಸಬಹುದು.

ಮಾನದಂಡಗಳು:

ಅರ್ಜಿದಾರರ ಕುಟುಂಬದ ಆದಾಯ ಗ್ರಾಮೀಣ ಪ್ರದೇಶದವರಿಗೆ ರೂ. 1.50ಲಕ್ಷ ಮತ್ತು ನಗರ ಪ್ರದೇಶದವರಿಗೆ ರೂ.2 ಲಕ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ಕಳೆದ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರ ವಯೋಮಿತಿ 21 ರಿಂದ 50 ವರ್ಷದವರೆಗೆ ಇರಬೇಕು. ಅರ್ಜಿದಾರರ ಕುಟುಂಬದ ಸದಸ್ಯರು ಸರ್ಕಾರಿ/ಅರೆಸರ್ಕಾರಿ ಸಂಸ್ಥೆಯ ನೌಕರರಾಗಿರಬಾರದು. ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ, ಅಲೆಮಾರಿ, ಅರೆಅಲೆಮಾರಿ ಜನಾಂಗದವರ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಆರ್ಥಿಕ ಸೌಲಭ್ಯ ಪಡೆದಿರಬಾರದು. ಅರ್ಜಿದಾರರು ಕಡ್ಡಾಯವಾಗಿ UAM (Udyog Adhar Memorandum) ನಲ್ಲಿ ನೊಂದಾಯಿತರಾಗಿರಬೇಕು.

ಸಹಾಯಧನ ಹೊರತುಪಡಿಸಿ ಉಳಿದ ಮೊತ್ತವು ಬ್ಯಾಂಕ್ ಸಾಲವಾಗಿರುತ್ತದೆ. ಸ್ಥಾಪಿಸಿದ ಉದ್ಯಮದಲ್ಲಿ ಒಬ್ಬ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಅರ್ಜಿದಾರರು ಒಳಪಡುವ ಉಪಜಾತಿಗೆ ಸಂಬಂಧಿಸಿದ ಅಭಿವೃದ್ಧಿ ನಿಗಮಗಳಿಗೆ ಯೋಜನಾ ವರದಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಬ್ಯಾಂಕುಗಳಿಂದ ಸಹಾಯಧನ ಬಿಡುಗಡೆ ಮಾಡಲು ಕ್ಲೇಮ್ ಬಂದ ಕೂಡಲೇ ಸಹಾಯಧನ ಮೊತ್ತವನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ, ಜನತಾ ಬಜಾರ್ ಕಟ್ಟಡ, 2ನೇ ಮಹಡಿ, ಜಿ.ಎಚ್.ಎಸ್ ರೋಡ್ ಮಂಗಳೂರು. ದೂರವಾಣಿ ಸಂಖ್ಯೆ: 0824-2951814 ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ