ಹಳದಿ ಕಾಮಾಲೆ – ಬದುಕಿನಲ್ಲಿ ಸುನಾಮಿಯ ಅಲೆ! |  ಹೆಪಟೈಟಿಸ್ ಬಗ್ಗೆ ಎಚ್ಚರ ಇರಲಿ: ಜುಲೈ 28 – ವಿಶ್ವ ಹೆಪಟೈಟಿಸ್ ದಿನ - Mahanayaka

ಹಳದಿ ಕಾಮಾಲೆ – ಬದುಕಿನಲ್ಲಿ ಸುನಾಮಿಯ ಅಲೆ! |  ಹೆಪಟೈಟಿಸ್ ಬಗ್ಗೆ ಎಚ್ಚರ ಇರಲಿ: ಜುಲೈ 28 – ವಿಶ್ವ ಹೆಪಟೈಟಿಸ್ ದಿನ

hepatitis day
28/07/2026

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಯಕೃತ್ತು (ಲಿವರ್) ಆಹಾರದಲ್ಲಿರುವ ಪೋಷಕಾಂಶಗಳ ಸಂಸ್ಕರಣೆ, ದೇಹದ ಚಯಾಪಚಯ ಕ್ರಿಯೆಗಳು, ರಕ್ತದಲ್ಲಿನ ವಿವಿಧ ವಸ್ತುಗಳ ಸಂಸ್ಕರಣೆ ಹಾಗೂ ಹಾನಿಕಾರಕ ಪದಾರ್ಥಗಳನ್ನು ನಿಷ್ಕ್ರಿಯಗೊಳಿಸುವಂತಹ ಅನೇಕ ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದರೆ ವೈರಸ್‌ಗಳಿಂದ ಉಂಟಾಗುವ ಹೆಪಟೈಟಿಸ್ ಯಕೃತ್ತಿನಲ್ಲಿ ಉರಿಯೂತ ಉಂಟುಮಾಡಿ, ಕೆಲವೊಮ್ಮೆ ಗಂಭೀರವಾದ ಯಕೃತ್ತಿನ ಕಾಯಿಲೆಗಳಿಗೆ ಕಾರಣವಾಗಬಹುದು.

ಹೆಪಟೈಟಿಸ್‌ ಗೆ ಪ್ರಮುಖವಾಗಿ ಹೆಪಟೈಟಿಸ್ A, B, C, D ಮತ್ತು E ವೈರಸ್‌ಗಳು ಕಾರಣವಾಗುತ್ತವೆ. ಇವುಗಳ ಹರಡುವ ವಿಧಾನ ಮತ್ತು ಪರಿಣಾಮಗಳು ಒಂದಕ್ಕೊಂದು ಭಿನ್ನವಾಗಿವೆ. ವಿಶೇಷವಾಗಿ ಹೆಪಟೈಟಿಸ್ B ಮತ್ತು C ದೀರ್ಘಕಾಲೀನ ಸೋಂಕಾಗಿ ಮುಂದುವರಿದು ಯಕೃತ್ತಿನ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗಬಹುದು.

 ಹೆಪಟೈಟಿಸ್ ಎಷ್ಟು ಗಂಭೀರ?    

ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಅಂದಾಜಿನ ಪ್ರಕಾರ, 2024ರಲ್ಲಿ ಸುಮಾರು 28.7 ಕೋಟಿ ಜನರು ದೀರ್ಘಕಾಲೀನ ಹೆಪಟೈಟಿಸ್ B ಅಥವಾ C ಸೋಂಕಿನೊಂದಿಗೆ ಬದುಕುತ್ತಿದ್ದರು ಮತ್ತು ಹೆಪಟೈಟಿಸ್ B ಹಾಗೂ C ಕಾರಣದಿಂದ ಸುಮಾರು 13 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಆತಂಕಕಾರಿ ಸಂಗತಿಯೆಂದರೆ, ಸೋಂಕಿತರಲ್ಲಿ ಬಹಳಷ್ಟು ಜನರಿಗೆ ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಹೀಗಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

ಹೆಪಟೈಟಿಸ್ ಹೇಗೆ ಹರಡುತ್ತದೆ?  

ಹೆಪಟೈಟಿಸ್ A ಮತ್ತು E ಸಾಮಾನ್ಯವಾಗಿ ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುತ್ತವೆ. ಆದ್ದರಿಂದ ವಿಶೇಷವಾಗಿ ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛ ಆಹಾರ ಮತ್ತು ಉತ್ತಮ ವೈಯಕ್ತಿಕ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ಹೆಪಟೈಟಿಸ್ B, C ಮತ್ತು D ಸೋಂಕುಗಳು ಮುಖ್ಯವಾಗಿ ಸೋಂಕಿತ ರಕ್ತ ಅಥವಾ ದೇಹದ ದ್ರವಗಳ ಸಂಪರ್ಕದಿಂದ ಹರಡಬಹುದು. ಸುರಕ್ಷಿತವಲ್ಲದ ಇಂಜೆಕ್ಷನ್‌ಗಳು, ಸೋಂಕಿತ ಸೂಜಿ ಅಥವಾ ಇತರ ತೀಕ್ಷ್ಣ ಉಪಕರಣಗಳ ಬಳಕೆ, ಪರೀಕ್ಷಿಸದ ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಹೆಪಟೈಟಿಸ್ B ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಸೋಂಕು ಹರಡುವುದು ಪ್ರಮುಖ ಮಾರ್ಗಗಳಾಗಿವೆ.

ಆದ್ದರಿಂದ ಕ್ಷೌರದ ಅಂಗಡಿಗಳಲ್ಲಿ ಸರಿಯಾಗಿ ಸ್ವಚ್ಛಗೊಳಿಸದ ಬ್ಲೇಡ್ ಅಥವಾ ತೀಕ್ಷ್ಣ ಉಪಕರಣಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು.

ಹೆಪಟೈಟಿಸ್ ಲಕ್ಷಣಗಳೇನು?

  • ಕೆಲವರಿಗೆ ಯಾವುದೇ ಲಕ್ಷಣಗಳು ಕಾಣಿಸದೇ ಇರಬಹುದು. ಕಾಣಿಸಿಕೊಂಡರೆ ಸಾಮಾನ್ಯವಾಗಿ:
  • ಜ್ವರ, ಆಯಾಸ ಮತ್ತು ದೌರ್ಬಲ್ಯ, ಹಸಿವು ಕಡಿಮೆಯಾಗುವುದು, ವಾಕರಿಕೆ ಮತ್ತು ವಾಂತಿ
  • ಹೊಟ್ಟೆಯ ಬಲಭಾಗದಲ್ಲಿ ಅಸ್ವಸ್ಥತೆ ಅಥವಾ ನೋವು, ಗಾಢ (ಹಳದಿ)  ಬಣ್ಣದ ಮೂತ್ರ, ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು — ಕಾಮಾಲೆ
  • ಮುಂದುವರಿದ ದೀರ್ಘಕಾಲೀನ ಹೆಪಟೈಟಿಸ್ B ಅಥವಾ C ಸೋಂಕು ಯಕೃತ್ತಿನ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಹೆಪಟೈಟಿಸ್‌ಗೆ ಚಿಕಿತ್ಸೆ ಇದೆಯೇ?

  • ಇದು ಯಾವ ರೀತಿಯ ಹೆಪಟೈಟಿಸ್ ಎಂಬುದರ ಮೇಲೆ ಚಿಕಿತ್ಸೆ ಅವಲಂಬಿತವಾಗಿರುತ್ತದೆ.
  • ಹೆಪಟೈಟಿಸ್ Aಗೆ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಸಾಮಾನ್ಯವಾಗಿ ಅಗತ್ಯವಿರುವುದಿಲ್ಲ; ಸಾಕಷ್ಟು ದ್ರವ, ಪೌಷ್ಟಿಕ ಆಹಾರ ಮತ್ತು ವಿಶ್ರಾಂತಿಯಂತಹ ಸಹಾಯಕ ಚಿಕಿತ್ಸೆಯಿಂದ ಹೆಚ್ಚಿನವರು ಚೇತರಿಸಿಕೊಳ್ಳುತ್ತಾರೆ.
  • ದೀರ್ಘಕಾಲೀನ ಹೆಪಟೈಟಿಸ್ Bಗೆ ವೈದ್ಯರ ಸಲಹೆಯಂತೆ ಆಂಟಿವೈರಲ್ ಔಷಧಿಗಳನ್ನು ಬಳಸಬಹುದು. ಇವು ರೋಗದ ಪ್ರಗತಿಯನ್ನು ನಿಧಾನಗೊಳಿಸಿ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
  • ಹೆಪಟೈಟಿಸ್ Cಗೆ ಈಗ ಅತ್ಯಂತ ಪರಿಣಾಮಕಾರಿ ಬಾಯಿಯಿಂದ ತೆಗೆದುಕೊಳ್ಳುವ ಆಂಟಿವೈರಲ್ ಔಷಧಿಗಳು ಲಭ್ಯವಿದ್ದು, ಸೂಕ್ತ ಚಿಕಿತ್ಸೆಯಿಂದ 95%ಕ್ಕಿಂತ ಹೆಚ್ಚಿನವರನ್ನು ಗುಣಪಡಿಸಬಹುದು.
  • ಆದ್ದರಿಂದ “ಹೆಪಟೈಟಿಸ್ ಬಂದರೆ ಚಿಕಿತ್ಸೆ ಇಲ್ಲ” ಎಂಬ ತಪ್ಪು ಕಲ್ಪನೆಯನ್ನು ದೂರ ಮಾಡುವುದು ಅತ್ಯಂತ ಮುಖ್ಯ.

ತಡೆಗಟ್ಟುವಿಕೆಯೇ ಉತ್ತಮ ಮಾರ್ಗ, ಹೆಪಟೈಟಿಸ್‌ನ್ನು ತಡೆಗಟ್ಟಲು:

  1. ಹೆಪಟೈಟಿಸ್ B ಲಸಿಕೆ ಪಡೆಯಿರಿ.
  2. ಶುದ್ಧ ಕುಡಿಯುವ ನೀರು ಮತ್ತು ಸುರಕ್ಷಿತ ಆಹಾರ ಸೇವಿಸಿ.
  3. ಕೈಗಳನ್ನು ನಿಯಮಿತವಾಗಿ ಸ್ವಚ್ಛವಾಗಿ ತೊಳೆಯಿರಿ.
  4. ಸುರಕ್ಷಿತ ಇಂಜೆಕ್ಷನ್ ಮತ್ತು ವೈದ್ಯಕೀಯ ಉಪಕರಣಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಿ.
  5. ಸೂಜಿ, ಬ್ಲೇಡ್, ರೇಜರ್ ಮುಂತಾದವುಗಳನ್ನು ಹಂಚಿಕೊಳ್ಳಬೇಡಿ.
  6. ಸುರಕ್ಷಿತ ರಕ್ತದ ಬಳಕೆಯನ್ನು ಖಚಿತಪಡಿಸಿಕೊಳ್ಳಿ.
  7. ಅಸುರಕ್ಷಿತ ಲೈಂಗಿಕ ಸಂಪರ್ಕವನ್ನು ತಪ್ಪಿಸಿ.

WHO ಪ್ರಕಾರ ಹೆಪಟೈಟಿಸ್ Bಗೆ ಪರಿಣಾಮಕಾರಿ ಲಸಿಕೆ ಲಭ್ಯವಿದೆ ಮತ್ತು ಹೆಪಟೈಟಿಸ್ Cಗೆ ಗುಣಪಡಿಸುವ ಚಿಕಿತ್ಸೆ ಲಭ್ಯವಿದೆ.

ಕಾಮಾಲೆಯನ್ನು ನಿರ್ಲಕ್ಷಿಸಬೇಡಿ!

ಕಣ್ಣು ಅಥವಾ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು, ನಿರಂತರ ಆಯಾಸ, ಗಾಢ ಬಣ್ಣದ ಮೂತ್ರ ಅಥವಾ ಇತರ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧೋಪಚಾರ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆಯಂತೆ ಸೂಕ್ತ ರಕ್ತ ಪರೀಕ್ಷೆ ಮತ್ತು ಇತರ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.

ಪರೀಕ್ಷೆ ಮಾಡಿಸಿ – ಲಸಿಕೆ ಪಡೆಯಿರಿ – ಸುರಕ್ಷಿತವಾಗಿರಿ – ಯಕೃತ್ತನ್ನು ರಕ್ಷಿಸಿಕೊಳ್ಳಿ.

ಈ ವರ್ಷದ ವಿಶ್ವ ಹೆಪಟೈಟಿಸ್ ದಿನದ ಘೋಷವಾಕ್ಯ “Hepatitis: Let’s Break It Down”

“ಹೆಪಟೈಟಿಸ್ – ಅಡೆತಡೆಗಳನ್ನು ನಿವಾರಿಸೋಣ”

2026ರ ಈ ಅಭಿಯಾನವು ಹೆಪಟೈಟಿಸ್ ತಡೆಗಟ್ಟುವಿಕೆ, ಪರೀಕ್ಷೆ, ಚಿಕಿತ್ಸೆ ಮತ್ತು ಆರೈಕೆಗೆ ಇರುವ ಅಡೆತಡೆಗಳನ್ನು ನಿವಾರಿಸಿ, ಜನರಿಗೆ ಅಗತ್ಯ ಸೇವೆಗಳು ತಲುಪುವಂತೆ ಮಾಡುವುದಕ್ಕೆ ಒತ್ತು ನೀಡುತ್ತದೆ.

ನೆನಪಿಡಿ: ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ.ಇಂದು ಜಾಗೃತಿ – ನಾಳೆ ಆರೋಗ್ಯಕರ ಯಕೃತ್ತು!

ಲೇಖಕ:   

ಡಾ. ರವಿನಂದನ್ ಎ.ಪಿ. 

ಎಂ.ಫಾರ್ಮ್, ಎಂಬಿಎ, ಪಿಎಚ್ಡಿ,

ಪ್ರೊಫೆಸರ್ ಮತ್ತು ಮುಖ್ಯಸ್ಥ, ಫಾರ್ಮಸಿ ಪ್ರಾಕ್ಟೀಸ್ ವಿಭಾಗ, ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್, ತುಮಕೂರು


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ