ಕೆಲಸ ಮಾಡುವ ತಾಕತ್ ಇರೋದು ಬಿಜೆಪಿಗೆ ಮಾತ್ರ: ಕೆ.ಅಣ್ಣಾಮಲೈ
ಚಾಮರಾಜನಗರ: ಕೆಲಸ ಮಾಡುವ ತಾಕತ್ ಇರುವುದು ಬಿಜೆಪಿಗಷ್ಟೇ ಅದು ಕಾಂಗ್ರೆಸ್ ಗಿಲ್ಲ ಎಂದು ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಬಿಜೆಪಿಗಷ್ಟೇ ಜನರ ಕೆಲಸ ಮಾಡುವ ತಾಖತ್ ಇರುವುದು, ಕಾಂಗ್ರೆಸ್ ಪಾರ್ಟಿಗೆ ಅದಿಲ್ಲ, ಕಾಂಗ್ರೆಸ್ ಒಂದು ಪರಿವಾರದ ಪಕ್ಷ- ನಮ್ಮದು ಜನರ ಪಕ್ಷ ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.
ಕರ್ನಾಟಕ ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬದ ಸೇವೆ ಮಾಡಲು, ಗಾಂಧಿ ಪರಿವಾರದ ಕೆಲಸ ಮಾಡಲಷ್ಟೇ ಇಲ್ಲಿನ ನಾಯಕರಿದ್ದಾರೆ, ಅವರು ಒಂದೊಂದು ಸಾರಿ ಅಧಿಕಾರಕ್ಕೆ ಬಂದಾಗಲೂ ಗಾಂಧಿ ಕುಟುಂಬವನ್ನೂ ಹೇಗೆ ಖುಷಿ ಗೊಳಿಸಬೇಕೇಂದೆ ಯೋಚನೆ ಮಾಡುತ್ತಾರೆ ಎಂದು ಕೈ ಪಡೆ ವಿರುದ್ಧ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಆ ಕೆಲಸ ಮಾಡುತ್ತೇವೆ- ಈ ಕೆಲಸ ಮಾಡುತ್ತೇವೆ ಎನ್ನುತ್ತಾರೆ, 70 ವರ್ಷದಲ್ಲಿ 60 ವರ್ಷ ಆಡಲು ಆಡಳಿತ ನಡೆಸಿದ್ದಾರೆ, ಸಿದ್ದರಾಮಯ್ಯ- ಡಿಕೆಶಿ ನಿನ್ನೆ ಮೊನ್ನೆ ರಾಜ್ಯಕ್ಕೆ ಬಂದವರಲ್ಲ, ಅಧಿಕಾರ ಅನುಭವಿಸಿದ್ದಾರೆ..? ಏನು ಮಾಡಿದ್ದಾರೆ ಎಂದು ಹೇಳಲಿ. ಅವರು ಮೈಕ್ ಬಳಸುವುದು ಕೇವಲ ಬಿಜೆಪಿ ವಿರುದ್ಧ ಟೀಕೆ ಮಾಡಲೇ ಹೊರತು ಅಭಿವೃದ್ಧಿ ಬಗ್ಗೆ ಮಾತನಾಡಲು ಅಲ್ಲ ಎಂದು ಕಿಡಿಕಾರಿದರು.
ಇದು ಟ್ರೈಲರ್ ಅಷ್ಟೇ :
ಮೀಸಲಾತಿ ವಿಚಾರವನ್ನು ಯಾರು ಮುಟ್ಟುತ್ತಿರಲಿಲ್ಲ, ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಮೀಸಲಾತಿಯನ್ನು ಬದಲಿಸಿದ್ದೇವೆ, ಒಳ ಮೀಸಲಾತಿ ಕೊಟ್ಟಿದ್ದೇವೆ, ಜನರ ಮತ ಬೇಕಿತ್ತು- ಆದರೆ ಅವರ ಅಭಿವೃದ್ಧಿ ಬೇಕಿರಲಿಲ್ಲ, ಆದರೆ ಬೊಮ್ಮಾಯಿ ಅವರು ಜನಪರವಾಗಿ ಮೀಸಲಾತಿ ತಂದಿದ್ದಾರೆ, ಇದು ಕೇವಲ ಟ್ರೈಲರ್ ಅಷ್ಟೇ ಬದಲಾಯಿಸಬೇಕಾದ್ದು ಬಹಳಷ್ಟಿದೆ ಎಂದರು.
ನಾವು ಎಲ್ಲಾ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿಲ್ಲ, ಮಾಡಬೇಕಾದ ಕೆಲಸ ಬಹಳಷ್ಟಿದೆ, ಡಬಲ್ ಎಂಜಿನ್ ಸರ್ಕಾರದ ವೇಗ ನೋಡಿದ್ದೀರಿ, 100, 120, 107 ಹೀಗೆ ಈ ಸಂಖ್ಯೆ ಬೇಡ, 150 ಸ್ಥಾನ ಕೊಡಿ ಬಳಿಕ ನಿಮ್ಮ ಮನೆ ಬಾಗಿಲಿಗೆ ಅಭಿವೃದ್ಧಿ ಪರ್ವ ನೋಡಿ, ಈ ಬಾರಿ ಚಾಮರಾಜನಗರದಲ್ಲಿ ನಾಲ್ಕಕ್ಕೇ ನಾಲ್ಕು ಸ್ಥಾನದಲ್ಲೂ ಬಿಜೆಪಿ ಪತಾಕೆ ಹಾರಿಸಿ ಎಂದು ಮನವಿ ಮಾಡಿದರು.
ತಮಿಳಿನಲ್ಲೂ ಭಾಷಣ: ಹನೂರು ಕ್ಷೇತ್ರದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದಿದ್ದರಿಂದ ತಮಿಳುನಲ್ಲೂ ಭಾಷಣ ಮಾಡಿದರು. ಅಭಿವೃದ್ಧಿ ಕೇವಲ ಬೆಂಗಳೂರಿನಲ್ಲಷ್ಟೇ ಇರಬಾರದು ಅದು ಚಾಮರಾಜನಗರದಲ್ಲೂ ಆಗಬೇಕು, ಬೀದರ್ ನಲ್ಲೂ ಆಗಬೇಕು ಅದಕ್ಕಾಗಿ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಬರಬೇಕೆಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜನಾಶ್ರಯ ವೆಂಕಟೇಶ್, ನಿಶಾಂತ್, ದತ್ತೇಶ್ ಹಾಗೂ ಡಾ.ಪ್ರೀತಂ ನಾಗಪ್ಪ ಒಗ್ಗಟ್ಟು ಪ್ರದರ್ಶಿಸಿ ಬಿಜೆಪಿಯನ್ನು ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























