ಅನ್ನದಾತರಿಗೆ ಕಾಂಗ್ರೆಸ್ ಸರಕಾರದಿಂದ ಅನ್ಯಾಯ: ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ಷೇಪ - Mahanayaka

ಅನ್ನದಾತರಿಗೆ ಕಾಂಗ್ರೆಸ್ ಸರಕಾರದಿಂದ ಅನ್ಯಾಯ: ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ಷೇಪ

aswath narayan
09/08/2023


Provided by

ಬೆಂಗಳೂರು: ಅನ್ನದಾತರಿಗೆ ಕಾಂಗ್ರೆಸ್ ಸರಕಾರವು ಅನ್ಯಾಯ ಮಾಡುತ್ತಿದೆ. ಇದು ಬಜೆಟ್‍ನಲ್ಲೂ ಪ್ರತಿಫಲಿಸಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಕ್ಷೇಪಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಬಿಜೆಪಿ ಬೆಂಗಳೂರು ಮಹಾನಗರ ರೈತ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ರೈತವಿರೋಧಿ ನೀತಿಗಳೇ ಜಾರಿಗೊಳ್ಳುತ್ತವೆ. ರೈತರ ವಿರುದ್ಧ ನಿಲುವು ಅವರದು ಎಂದು ಟೀಕಿಸಿದರು.

ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರವನ್ನು ಕೇಂದ್ರ, 4 ಸಾವಿರವನ್ನು ರಾಜ್ಯ ಬಿಜೆಪಿ ಸರಕಾರ ನೀಡುತ್ತಿತ್ತು. ರಾಜ್ಯ ನೀಡುವ ಮೊತ್ತವನ್ನು ಸ್ಥಗಿತಗೊಳಿಸಲಾಗಿದೆ. ವಿದ್ಯಾನಿಧಿ ಸೇರಿ ಅನೇಕ ಯೋಜನೆಗಳು ಸ್ಥಗಿತವಾಗಿವೆ. ಅವುಗಳನ್ನು ಮತ್ತೆ ಜಾರಿ ಮಾಡಿ ಎಂದು ಅವರು ಆಗ್ರಹಿಸಿದರು.

ಕ್ಷೀರ ಸಮೃದ್ಧಿ ಬ್ಯಾಂಕ್, ಗೋಶಾಲೆ ಯೋಜನೆ ಹಿಂಪಡೆಯಲಾಗಿದೆ. ರೈತರ ವಿಚಾರದಲ್ಲಿ ಎಲ್ಲವೂ ರೈತರ ವಿರುದ್ಧ ನಿಲುವನ್ನು ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಕೈಗೊಂಡಿದೆ ಎಂದು ಆಕ್ಷೇಪ ಸೂಚಿಸಿದರು. ಎಪಿಎಂಸಿ ಕಾಯ್ದೆಯನ್ನು ರೈತಪರವಾಗಿ ಮಾಡಿದ್ದು, ಅದನ್ನು ದಲ್ಲಾಳಿಗಳ ಪರವಾಗಿ ಪರಿವರ್ತಿಸಲಾಗಿದೆ ಎಂದು ಟೀಕಿಸಿದರು.

ರೈತರ ಆತ್ಮಹತ್ಯೆ ತೀವ್ರವಾಗಿ ಹೆಚ್ಚಾಗಿದೆ. ಈ ಪೈಕಿ ಒಬ್ಬರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಬಹಳಷ್ಟು ಅರ್ಜಿಗಳನ್ನು ಕಡೆಗಣಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಒಬ್ಬರೇ ಒಬ್ಬ ರೈತರ ಮನೆಗೆ ಸಿಎಂ, ಸಚಿವರು ಹೋಗಿಲ್ಲ. ಕೃಷಿ ಇಲಾಖೆಯಲ್ಲಿ ಲಂಚ ಹೆಚ್ಚಾಗಿದೆ. ಎಲ್ಲ ಇಲಾಖೆಗಳಲ್ಲೂ ವ್ಯವಸ್ಥಿತವಾಗಿ ಲಂಚದ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

ಶೌಚಾಲಯ, ಮನೆ ನಿರ್ಮಾಣ ಸೇರಿ ಎಲ್ಲ ಯೋಜನೆಗಳು ಸ್ಥಗಿತವಾಗಿವೆ. ಬಿಜೆಪಿ ರೈತಪರವಾಗಿದ್ದರೆ, ಕಾಂಗ್ರೆಸ್ ಸರಕಾರವು ಯಾವತ್ತೂ ರೈತ ವಿರೋಧಿ ಎಂದು ದೂರಿದರು. ಈ ಸರಕಾರವನ್ನು ಕಿತ್ತೆಸೆಯಬೇಕಿದೆ ಎಂದು ನುಡಿದರು.

ಈ ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಸಿ.ಟಿ.ರವಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರೈತ ಮೋರ್ಚಾ ಮುಖಂಡರು ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ