ಅತ್ತಿಬೆಲೆ ಪಟಾಕಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ: ಸುಟ್ಟು ಕರಕಲಾದ 14 ಕಾರ್ಮಿಕರು

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ದುರಂತದಲ್ಲಿ ಮೃತಪಟ್ಟ ಕಾರ್ಮಿಕರೆಲ್ಲರೂ ಪದವೀಧರರು ಎಂದು ಹೇಳಲಾಗಿದ್ದು, ಪಟಾಕಿ ಅಂಗಡಿಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ದುರಂತದಲ್ಲಿ ಕಾರ್ಮಿಕರು ಸುಟ್ಟು ಸಜೀವ ದಹನವಾಗಿದ್ದಾರೆ.
ಪಟಾಕಿ ದುರಂತದಲ್ಲಿ ಮಡಿದ 7 ಮಂದಿಯ ಮೃತದೇಹದ ಗುರುತು ಈಗಾಗಲೇ ಪತ್ತೆ ಮಾಡಲಾಗಿದೆ. ಇವರೆಲ್ಲರೂ ತಮಿಳುನಾಡು ಮೂಲದವರು. ಧರ್ಮಪುರಿ ಜಿಲ್ಲೆಯ ವೆಡಪ್ಪನ್, ರಾಘವನ್, ಆದಿಕೇಶವನ್, ಗಿರಿ, ಮುನಿವೇಲಂ, ಆಕಾಶ್, ಇಳಂಬರ್ದಿ, ಚಂಗಂ ತಾಲೂಕಿನ ಪ್ರಕಾಶ್ ರಾಜ್ ಎಂಬವರ ಗುರುತು ಪತ್ತೆಯಾಗಿದೆ.
ಮೃತರ ಸಂಖ್ಯೆ 14ಕ್ಕೆ ಏರಿಕೆ:
ಪಟಾಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಭಾನುವಾರ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ 14ನೇ ಮೃತದೇಹವನ್ನ ಹೊರ ತೆಗೆದಿದ್ದಾರೆ.
ಅಂಗಡಿ ಮಾಲಿಕ ಹಾಗೂ ಆತನ ಮಗ ಅರೆಸ್ಟ್:
ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಾಜಿ ಟ್ರೇಡರ್ಸ್ ಮಳಿಗೆಯ ಮಾಲಿಕ ವಿ. ರಾಮಸ್ವಾಮಿ ರೆಡ್ಡಿ ಹಾಗೂ ಆತನ ಪುತ್ರ ನವೀನ್ ನನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಸ್ಫೋಟಕ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಚ್ ಎಸ್ ಆರ್ ಲೇಔಟ್ ನಿವಾಸಿ ಜಯಮ್ಮ ಹಾಗೂ ಅವರ ಮಗ ಅನಿಲ್ ರೆಡ್ಡಿ ಅವರ ಹೆಸರಿನಲ್ಲಿರುವ ಜಾಗದಲ್ಲಿ ಪಟಾಕಿ ಅಂಗಡಿ ಇತ್ತು ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿ ಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಘಟನೆಯಲ್ಲಿ ಆರೋಪಿ ನವೀನ್ ಗೆ ಕೂಡ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.