ದೇವರ ಮನೆ ಪ್ರವಾಸಕ್ಕೆ ಹೋದ ಬೆಳ್ತಂಗಡಿಯ ಯುವಕ ನಾಪತ್ತೆ ಪ್ರಕರಣ: ಕೊನೆಗೂ ಯುವಕ ಪತ್ತೆ - Mahanayaka
1:19 AM Thursday 6 - November 2025

ದೇವರ ಮನೆ ಪ್ರವಾಸಕ್ಕೆ ಹೋದ ಬೆಳ್ತಂಗಡಿಯ ಯುವಕ ನಾಪತ್ತೆ ಪ್ರಕರಣ: ಕೊನೆಗೂ ಯುವಕ ಪತ್ತೆ

deekshith
11/10/2023

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದೀಕ್ಷಿತ್ (27) ಅಕ್ಟೋಬರ್ 10 ರಂದು ಮಂಗಳವಾರ ಸಂಜೆ ನಾಪತ್ತೆಯಾಗಿದ್ದ. ಇದೀಗ ಆಕ್ಟೋಬರ್ 11 ರಂದು ಬೆಳಗ್ಗೆ ತನ್ನ ಮನೆಯ ಹತ್ತಿರದ ಮೋರಿಯಲ್ಲಿ ಕುಳಿತಿದ್ದನ್ನು ಊರವರು ಪತ್ತೆ ಹಚ್ಚಿ ಮನೆಗೆ ಸೇರಿಸಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅರಂತೊಟ್ಟು ದೀಕ್ಷಿತ್ ಪೂಜಾರಿ , ಸಂಪಾಜೆ ನಿವಾಸಿ ದೀಕ್ಷಿತ್ ಗೌಡ, ಜಾರ್ಲೋಟ್ಟು ನಿವಾಸಿ ಕಿರೋತ್ ಪೂಜಾರಿ, ಅಡೆಂಕಿಲೊಟ್ಟು‌ ನಿವಾಸಿ ಸುದರ್ಶನ್ ಗೌಡ ಒಂದೇ ಊರಿನವರಾಗಿದ್ದು ಇವರೆಲ್ಲ ದೇವರ ಮನೆಗೆ ಕಾರಿನಲ್ಲಿ ಹೋಗಿದ್ದರು.ದೇವರಮನೆಗೆ ಪ್ರವಾಸಕ್ಕೆ ಬಂದಿದ್ದು ಪ್ರವಾಸ ಮುಗಿಸಿ ಹಿಂದಿರುಗುವಾಗ ಕುಡಿದ ಮತ್ತಿನಲ್ಲಿದ್ದ ಯುವಕರ ಮಧ್ಯದಲ್ಲಿ ಗಲಾಟೆ ನಡೆದು ಹೊಡೆದಾಟ ಮಾಡಿಕೊಂಡಿದ್ದರು.

ನಂತರ‌ ಕೋಪದಿಂದ ದೀಕ್ಷಿತ್ ಪೂಜಾರಿ ಬೇರೆಯಾಗಿ ಹೋಗಿದ್ದ. ದೇವರ ಮನೆ ಸುತ್ತಮುತ್ತ ಮಂಜು ಕವಿದಿದ್ದರಿಂದ ಹುಡುಕಾಟಕ್ಕೆ ಅಡಚಣೆಯಾಗಿದ್ದು, ಇಂದು ಕಾರ್ಯಾಚರಣೆ ಮುಂದುವರೆಸಿದ್ದರು.ಇದೀಗ ಯುವಕ ಬೇರೆ ವಾಹನದ ಮೂಲಕ ಊರಿಗೆ ಮರಳಿದ್ದು, ಯುವಕ ಪತ್ತೆಯಾಗಿದ್ದಾನೆ ಎಂದು ಬಣಕಲ್ ಪೊಲೀಸರಿಗೆ ಮನೆಮಂದಿ ಮಾಹಿತಿ ನೀಡಿದ್ದಾರೆ. ಯುವಕರು ಕುಡಿದ ಮತ್ತಿನಲ್ಲಿ ಮಾಡಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.

ಇತ್ತೀಚಿನ ಸುದ್ದಿ