ದಲಿತರ ಕಾಲೋನಿಗೆ ಪೇಜಾವರ ಶ್ರೀ ಭೇಟಿ: ನಾವೆಲ್ಲ ಸನಾತನ ಧರ್ಮೀಯರು ಎಂದ ಸ್ವಾಮೀಜಿ - Mahanayaka

ದಲಿತರ ಕಾಲೋನಿಗೆ ಪೇಜಾವರ ಶ್ರೀ ಭೇಟಿ: ನಾವೆಲ್ಲ ಸನಾತನ ಧರ್ಮೀಯರು ಎಂದ ಸ್ವಾಮೀಜಿ

pejavara shri
12/10/2023


Provided by

ಹುಬ್ಬಳ್ಳಿ: ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗುರುವಾರ ಹುಬ್ಬಳ್ಳಿ ನಗರದ ಸಂಘಪರಿವಾರ ಕಾರ್ಯಕರ್ತರ ದಲಿತರ ಕಾಲೋನಿಗೆ ಭೇಟಿ ನೀಡಿದರು.

ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲೋಟಿ ಅವರ ಮನೆಗೆ ಭೇಟಿ ನೀಡಿದ ಶ್ರೀಗಳಿಗೆ  ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಪ್ರಚಾರಕ ಬಸವರಾಜ್ ಅವರು ಕುಟುಂಬದ ಸದಸ್ಯರನ್ನು ಪರಿಚಯ ಮಾಡಿಸಿದರು.

ಪಾದಯಾತ್ರೆ ವೇಳೆ ಭಕ್ತರು ಜೈಶ್ರೀರಾಮ್, ಬೋಲೋ ಭಾರತಮಾತಾಕಿ ಜೈ ಎಂದು ಘೋಷಣೆ ಕೂಗಿದರು. ಇಲ್ಲಿನ ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸ್ವಾಮೀಜಿ ಪೂಜೆ ಸಲ್ಲಿಸಿ ಆರತಿ ಬೆಳಗಿದರು.

ನಾವೆಲ್ಲ ಸನಾತನ ಧರ್ಮೀಯರು:

ದಲಿತರ ಕಾಲೋನಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು,  ನಾವೆಲ್ಲರೂ ಸನಾತನ ಧರ್ಮೀಯರು. ರಾಮ ನಮ್ಮ ಆದರ್ಶ ಪುರುಷ. ಶತಮಾನಗಳ ಹೋರಾಟದ ಫಲವಾಗಿ ಇದೀಗ ರಾಮಮಂದಿರ ನಿರ್ಮಾಣವಾಗುತ್ತಿದೆ.  ಜಗತ್ತಿನ ಸುಖಕ್ಕೆ ರಾಮ ಕಾರಣ. ರಾವಣ ಕೆಟ್ಟ ಗುಣಗಳ ಸಂಕೇತ. ಸುಖ, ಸಂತೋಷಕ್ಕಾಗಿ ರಾಮನನ್ನು ಆರಾಧನೆ ಮಾಡೋಣ ಎಂದರು.

ಬಡಿಯುತ್ತೇವೆ, ಕಡಿಯುತ್ತೇವೆ ಎನ್ನುವುದು ರಾವಣನಗುಣ. ಎಲ್ಲರೂ ರಾಮನ ಜಪ ಮಾಡೋಣ. ಮಕರ ಸಂಕ್ರಮಣದ ನಂತರ ರಾಮಮಂದಿರ ಉದ್ಘಾಟನೆಯಾಗಲಿದೆ ಎಂದರು.

ಇತ್ತೀಚಿನ ಸುದ್ದಿ