ಮಂಡ್ಯ ಮಣ್ಣಿನ ಋಣ, ಗುಣ ಎಂದಿಗೂ ಬಿಡಲ್ಲ: ದಳಪತಿಗಳಿಗೆ ಸುಮಲತಾ ಖಡಕ್ ಸಂದೇಶ

ಮಂಡ್ಯ: ಮಂಡ್ಯದ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲ ಆವರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷವಾದ ಸಂದರ್ಭದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಂಡ್ಯ ಸಂಸದೆ ಮಂಡ್ಯದ ಮಣ್ಣಿನ ಋಣ ಎಂದೆಂದಿಗೂ ಬಿಡಲ್ಲ ಎಂದಿದ್ದಾರೆ.
ಈ ಮಣ್ಣಿನ ಋಣ ಈ ಮಣ್ಣಿನ ಗುಣ ಎಂದೆಂದೂ ಬಿಡಲ್ಲ, ಸುಮಲತಾ ಅಂಬರೀಷ್ ಈ ಮಣ್ಣನ್ನೂ ಬಿಡಲ್ಲ ಎಂದ ಸಂಸದೆ, ನನ್ನ ಪತಿ ಅಂಬರೀಷ್ ಅವರು ತೀರಿಕೊಂಡಾಗ ಈ ಮಂಡ್ಯದ ಮಣ್ಣನ್ನು ಅವರ ಹಣೆಗೆ ತಿಲಕವಾಗಿ ಹಚ್ಚಿ ನಾವೆಲ್ಲಾ ಬೀಳ್ಕೊಟ್ಟಿದ್ದೆವು. ಇಂದು ಈ ವೇದಿಕೆ ಮುಖಾಂತರ ಮತ್ತೊಮ್ಮೆ ಹೇಳುತ್ತಿದ್ದೇನೆ. ಈ ಮಂಡ್ಯ ನೆಲದ ಗುಣ,ಋಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ, ಅದೇ ರೀತಿ ಈ ಮಣ್ಣನ್ನು ನಾನು ಬಿಡುವುದೂ ಇಲ್ಲ ಎಂದು ಹೇಳಿದರು.
ಚಿತ್ರರಂಗದಲ್ಲಿ ದರ್ಶನ್ ಅವರ ಬೆಳವಣಿಗೆ, ತಮ್ಮ ಕುಟುಂಬ ಮತ್ತು ದರ್ಶನ್ ಅವರ ನಡುವಿನ ಒಡನಾಟ ಬಗ್ಗೆ ಇದೇ ವೇಳೆ ಅವರು ಮಾತನಾಡಿದರು. ಜೊತೆಗೆ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ದಳಪತಿಗಳಿಗೆ ಖಡಕ್ ಸಂದೇಶ ರವಾನಿಸಿದರು.
ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದರೂ ಸುಮಲತಾ ಮಂಡ್ಯದಿಂದಲೇ ಸ್ಪರ್ಧಿಸಲಿದ್ದಾರೆ ಎನ್ನುವ ಸ್ಪಷ್ಟ ಸಂದೇಶವನ್ನು ಅವರು ಬಿಜೆಪಿ ಹೈಕಮಾಂಡ್ ಹಾಗೂ ದಳಪತಿಗಳಿಗೆ ರವಾನಿಸಿದ್ದಾರೆ
ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕವಿಟ್ಟು ಅಂಬರೀಶ್ಗೆ ಬೀಳ್ಕೊಟ್ಟೆವು. ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನು ಬಿಡೋದಿಲ್ಲ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.