ಸ್ವಾಮೀಜಿಗಳಿಗೆ ಪವಾಡದ ಅವಶ್ಯಕತೆ ಇಲ್ಲ, ಹಸಿದವರಿಗೆ ಅನ್ನ ನೀಡಿದರೂ ಸ್ಮರಣೀಯರಾಗಿ ಉಳಿಯುತ್ತಾರೆ: ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ - Mahanayaka
10:37 PM Thursday 29 - January 2026

ಸ್ವಾಮೀಜಿಗಳಿಗೆ ಪವಾಡದ ಅವಶ್ಯಕತೆ ಇಲ್ಲ, ಹಸಿದವರಿಗೆ ಅನ್ನ ನೀಡಿದರೂ ಸ್ಮರಣೀಯರಾಗಿ ಉಳಿಯುತ್ತಾರೆ: ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ

c somashekhar
21/09/2024

ಮೈಸೂರು: ಸ್ವಾಮೀಜಿಗಳಿಗೆ ಪವಾಡದ ಅವಶ್ಯಕತೆ ಇಲ್ಲ, ಹಸಿದ ಹೊಟ್ಟೆಗೆ ಅನ್ನ ನೀಡಿದರೂ ಸ್ಮರಣೀಯರಾಗಿ ಉಳಿಯುತ್ತಾರೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ ಹೇಳಿದರು.

ಜೆಎಸ್‌ಎಸ್ ತಾಂತ್ರಿಕ ವಿಶ್ವವಿದ್ಯಾಲಯವು ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 109ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾಜಕ್ಕೆ ಆರೋಗ್ಯ, ಅಭಯ, ಆಶ್ರಯ, ಜ್ಞಾನ, ದಾಸೋಹದ ಸೇವೆ ನೀಡುವ ಮೂಲಕ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮಾದರಿಯಾಗಿದ್ದು, ಪ್ರಸ್ತುತ ಅವರ ಕಾರ್ಯಗಳನ್ನು ಅನುಸರಿಸುವ ಅಗತ್ಯವಿದೆ. ಸಣ್ಣ ಸಹಾಯಕ್ಕೆ ದೊಡ್ಡ ಪುರಸ್ಕಾರದ ಆಸೆ ಪಡುವವರ ನಡುವೆ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿದ ಸ್ವಾಮೀಜಿ ತಮ್ಮ ಗುಣದಿಂದ ದೊಡ್ಡವರಾಗುತ್ತಾರೆ ಎಂದು ಅವರು ಹೇಳಿದರು.

ಒಂದು ಬಾರಿ ಚಾಮರಾಜನಗರ ವಿದ್ಯಾರ್ಥಿನಿಲಯದಲ್ಲಿ ಊಟಕ್ಕೆ ತೊಂದರೆಯಾದಾಗ ರಾಜಮುದ್ರೆ ಉಂಗುರ ಒತ್ತೆಯಿಟ್ಟು ಸಾಮಾಗ್ರಿ ಖರೀದಿಸಿದ್ದರು. ತಮ್ಮ ಸಂಸ್ಥೆಯಲ್ಲಿ ಮುಸ್ಲಿಂ ಸಮುದಾಯದವರಿಗೂ ಶಿಕ್ಷಣಕ್ಕೆ ಅವಕಾಶ ನೀಡಿ ಜಾತ್ಯತೀತವಾಗಿ ಕೆಲಸ ಮಾಡಿದರು. ಹೀಗೆ ತನ್ನ ಸ್ವಂತದ ಬಗ್ಗೆ ಯೋಚಿಸದೆ ಸಮಾಜದ ಒಳಿತಿನ ಬಗ್ಗೆ ಯೋಚನೆ ಮಾಡುತ್ತಿದ್ದರು ಎಂದು ಸ್ವಾಮೀಜಿಯವರನ್ನು ಸ್ಮರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಮಾತನಾಡಿದರು.  ಜೆಎಸ್‌ಎಸ್‌ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎ.ಎನ್‌.ಸಂತೋಷ್‌ ಕುಮಾರ್‌, ಕುಲಸಚಿವ ಹರೀಶ್‌, ಪದಾಧಿಕಾರಿಗಳಾದ ನಟರಾಜು, ಧನರಾಜ್‌ ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ