ಚಿಕ್ಕಮಗಳೂರು: ನೀರಿಗಾಗಿ ಭದ್ರಾ ನದಿ ನಾಲೆ ಮೇಲೆ ಕುಳಿತು ರೈತರ ಉಗ್ರ ಪ್ರತಿಭಟನೆ
ಅಜ್ಜಂಪುರ: ಕುಡಿಯುವ ನೀರಿಗಾಗಿ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹೆಬ್ಬೂರು ಸಮೀಪದ 3ನೇ ಚಾನೆಲ್ ಬಳಿ ರೈತರು ಭದ್ರಾ ನದಿ ನಾಲೆ ಮೇಲೆ ಕುಳಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಗೆ ಭದ್ರಾ ಯೋಜನೆಯಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ಸ್ಥಳೀಯ ರೈತರು ಆಕ್ರೋಶ ಹೊರಹಾಕಿದ್ದಾರೆ. “ಮೊದಲು ನಮಗೆ ನೀರು ಬಿಡಿ, ಆಮೇಲೆ ಚಿತ್ರದುರ್ಗಕ್ಕೆ ಬಿಡಿ” ಎಂದು ಪಟ್ಟುಹಿಡಿದು ನಾಲೆಯ ಮೇಲೆಯೇ ಧರಣಿ ನಡೆಸಿದ್ದಾರೆ.
ಚಿತ್ರದುರ್ಗದವರಿಂದ ಭದ್ರಾ ಯೋಜನೆ ಕಾಲುವೆಗೆ ಮಣ್ಣು ತುಂಬಲಾಗಿದೆ ಎಂದು ರೈತರು ಗಂಭೀರ ಆರೋಪ ಮಾಡಿದರು. ಅಜ್ಜಂಪುರ ತಾಲೂಕಿನ ಅಜ್ಜಂಪುರ ಹಾಗೂ ಶಿವನಿ ಹೋಬಳಿ ವ್ಯಾಪ್ತಿಯ ಸುಮಾರು 60 ರಿಂದ 70 ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಿದೆ. “ನಮ್ಮ ಹಳ್ಳಿಗಳ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಹೀಗಿರುವಾಗ ಚಿತ್ರದುರ್ಗಕ್ಕೆ ಹೇಗೆ ನೀರು ಬಿಡುತ್ತೀರಿ?” ಎಂದು ಪ್ರತಿಭಟನಾಕಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಜ್ಜಂಪುರ ತಾಲೂಕಿನ ಸುತ್ತಮುತ್ತಲಿನ 8 ರಿಂದ 10 ಹಳ್ಳಿಗಳ ಸಾವಿರಾರು ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಸ್ಥಳೀಯ ರೈತರ ಕುಡಿಯುವ ನೀರಿನ ಬೇಡಿಕೆಯನ್ನು ಈಡೇರಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























