ಸಫ್ದರ್ ಜಂಗ್ ಆಸ್ಪತ್ರೆಯಿಂದ ಸೋನಮ್ ವಾಂಗ್ ಚುಕ್ ಸಂದೇಶ: ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ 3 ಪ್ರಮುಖ ಷರತ್ತು! - Mahanayaka

ಸಫ್ದರ್ ಜಂಗ್ ಆಸ್ಪತ್ರೆಯಿಂದ ಸೋನಮ್ ವಾಂಗ್ ಚುಕ್ ಸಂದೇಶ: ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ 3 ಪ್ರಮುಖ ಷರತ್ತು!

Sonam Wangchuk.jpg (1)
21/07/2026

ನವದೆಹಲಿ: ‘ಚಲೋ ಸಂಸದ್’ (ಸಂಸತ್ ಚಲೋ) ಪ್ರತಿಭಟನಾ ಮೆರವಣಿಗೆಯ ಮುನ್ನಾದಿನದಂದು, ಶೈಕ್ಷಣಿಕ ಕ್ಷೇತ್ರದಲ್ಲಿನ ಅಕ್ರಮಗಳು ಹಾಗೂ ಪಶ್ನೆಪತ್ರಿಕೆ ಸೋರಿಕೆ ಖಂಡಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಲಡಾಖ್ನ ಪ್ರಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್, ತಮ್ಮ ಉಪವಾಸ ಅಂತ್ಯಗೊಳಿಸಲು ಕೇಂದ್ರ ಸರ್ಕಾರಕ್ಕೆ 3 ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ.

ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಸ್ಪತ್ರೆಯಲ್ಲಿ ತಮ್ಮ ಸಂಚಾರ, ವಾಕ್ ಸ್ವಾತಂತ್ರ್ಯ ಮತ್ತು ಸಂವಹನಕ್ಕೆ ನಿರ್ಬಂಧ ಹೇರಲಾಗಿದ್ದು, ಇದನ್ನು “ಅಕ್ರಮ ಬಂಧನ” ಎಂದು ಕರೆದಿದ್ದಾರೆ.

ಸೋನಮ್ ವಾಂಗ್ಚುಕ್ ವಿಧಿಸಿರುವ 3 ಷರತ್ತುಗಳು:

ಶೈಕ್ಷಣಿಕ ವೈಫಲ್ಯದ ಹೊಣೆಗಾರಿಕೆ: ಇತ್ತೀಚೆಗೆ ನಡೆದ ಪರೀಕ್ಷಾ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವೈಫಲ್ಯಗಳ ಹೊಣೆಯನ್ನು ಕೇಂದ್ರ ಸರ್ಕಾರ ತಕ್ಷಣವೇ ಹೊರಬೇಕು.
ಸಂಸತ್ತಿನಲ್ಲಿ ಭರವಸೆ: ವಾಂಗ್ಚುಕ್ ಹಾಗೂ ‘ಸಿಜೆಪಿ’ (CJP) ನಾಯಕರು ಸಂಸತ್ತಿನ ಮನೆಬಾಗಿಲಿಗೆ ತಲುಪಿ, ವಿವಿಧ ಪಕ್ಷಗಳ ಸಂಸದರು ಮತ್ತು ನಾಯಕರು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಬೇಕು.

ಆಸ್ಪತ್ರೆಗೆ ಸಂಸದರ ಭೇಟಿ: ಒಂದು ವೇಳೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಿಂದ ಹೊರಹೋಗಲು ಸಾಧ್ಯವಾಗದಿದ್ದರೆ, ವಿವಿಧ ರಾಜಕೀಯ ಪಕ್ಷಗಳ ಸಂಸದರೇ ಸಫ್ದರ್ಜಂಗ್ ಆಸ್ಪತ್ರೆಗೆ ಭೇಟಿ ನೀಡಿ ಮೇಲಿನ ಭರವಸೆಯನ್ನು ನೀಡಬೇಕು.

ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ವಾಂಗ್ಚುಕ್ ಅವರು ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಆಸ್ಪತ್ರೆಗೆ ದಾಖಲು: ಸುದೀರ್ಘ ಉಪವಾಸದಿಂದ ಆರೋಗ್ಯ ಕ್ಷೀಣಿಸಿದ ಕಾರಣ, ದೆಹಲಿ ಪೊಲೀಸರು ಅವರನ್ನು ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು.

ಹೈಕೋರ್ಟ್ ಆದೇಶ: ಆಸ್ಪತ್ರೆಗೆ ದಾಖಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, ವೈದ್ಯಕೀಯ ತುರ್ತುಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರ ಸರಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಭದ್ರತೆ ಹೆಚ್ಚಳ: ಸಿಜೆಪಿ ನೇತೃತ್ವದಲ್ಲಿ ‘ಚಲೋ ಸಂಸದ್’ ಮೆರವಣಿಗೆ ಕರೆ ನೀಡಲಾಗಿದ್ದು, ಜಂತರ್ ಮಂತರ್ ಹಾಗೂ ಸಂಸತ್ತಿನ ಸುತ್ತಮುತ್ತ ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳ ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಲಾಗಿದೆ.

“ನನ್ನ ಸಂಚಾರ, ವಾಕ್ ಹಾಗೂ ಸಂವಹನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ.”
— ಆಸ್ಪತ್ರೆಯಿಂದ ಸೋನಮ್ ವಾಂಗ್ ಚುಕ್ ನೀಡಿದ ಹೇಳಿಕೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ