ಬುದ್ಧರಿಗೆ ಪೂಜೆ ಮಾಡಿದ ತಕ್ಷಣ ನೀವು ಬೌದ್ಧರಾಗುವುದಿಲ್ಲ | ಈ ಅಂಶಗಳ ಬಗ್ಗೆ ನಿಮಗೆ ತಿಳಿದಿದೆಯೇ? - Mahanayaka

ಬುದ್ಧರಿಗೆ ಪೂಜೆ ಮಾಡಿದ ತಕ್ಷಣ ನೀವು ಬೌದ್ಧರಾಗುವುದಿಲ್ಲ | ಈ ಅಂಶಗಳ ಬಗ್ಗೆ ನಿಮಗೆ ತಿಳಿದಿದೆಯೇ?

21/10/2020

ಇಡೀ ವಿಶ್ವವನ್ನೇ ಪರಿಣಾಮಕಾರಿಯಾಗಿ ವ್ಯಾಪಿಸಿದ ಭಾರತದ ಏಕೈಕ ಧರ್ಮ ಎಂದರೆ ಅದು ಬೌದ್ಧ ಧರ್ಮ. ಬೌದ್ಧ ಧರ್ಮ ಎಂದರೇನು ಎಂದು ಕೇಳಿದರೆ, ಬಹುತೇಕರು. ಅದೊಂದು ನಾಸ್ತಿಕವಾದ ಎಂದೇ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಬೌದ್ಧ ಧರ್ಮ ಎನ್ನುವುದು ಜಗತ್ತಿನ ಹಾಗೂ ಮಾನವನ ಬದುಕಿನ ವಾಸ್ತವವನ್ನು ತಿಳಿಸುವ ಒಂದು ಧರ್ಮವಾಗಿದೆ. ಅದರಲ್ಲೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿಚಯಿಸಿದ ದಮ್ಮ ಮನುಷ್ಯನ ಸ್ವಾಭಿಮಾನದ ಹಾಗೂ ಆತ್ಮಗೌರವದ ಮತ್ತು. ಸಹಬಾಳ್ವೆಗೆ ತೋರಿದ ಮಹತ್ವದ  ಕೈಗನ್ನಡಿ ಎಂದೇ ಹೇಳಬಹುದಾಗಿದೆ.

ಬುದ್ಧನ ಧಮ್ಮದಲ್ಲಿ ಬರುವ ಈ ಮೂರು ಅಂಶಗಳು ಒಬ್ಬ ಮನುಷ್ಯ ತನ್ನ ಜೀವನವನ್ನು ಯಾವ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂಬ ನೀತಿಯನ್ನು ಹೇಳುತ್ತದೆ ಮತ್ತು ನೈತಿಕತೆ ಎಂದರೇನು ಎಂಬ ಬಗ್ಗೆ ವಿಶ್ವದಲ್ಲೇ ಮೊದಲ ಬಾರಿಗೆ ಬೌದ್ಧ ಧರ್ಮ ಹೇಳಿಕೊಡುತ್ತದೆ. ಆ ಮೂರು ಅಂಶ ಯಾವುದು ಎಂದರೆ,  ಧಮ್ಮ, ಅಧಮ್ಮ, ಸದ್ಧಮ್ಮ. ಈ ಮೂರು ವಿಚಾರಗಳು ಏನೆಂದು ನೋಡೋಣ ಬನ್ನಿ…

ಧಮ್ಮ ಎಂದರೆ,  ಜೀವನವನ್ನು ಶಿಸ್ತು ಬದ್ಧವಾಗಿ ರೂಪಿಸಿಕೊಳ್ಳುವುದು ಎಂದು ಭಗವಾನ್ ಬುದ್ಧ ಹೇಳುತ್ತಾರೆ.  ಶರೀರ, ಮಾತು ಮತ್ತು ನಮ್ಮ ಮನಸ್ಸನ್ನು ಪವಿತ್ರವಾಗಿ ಅಥವಾ ನೈತಿಕವಾಗಿ ಇಟ್ಟುಕೊಳ್ಳುವುದು. ಬುದ್ಧ ಹೇಳಿದ ಇದೇ ಮಾತನ್ನು ನಾವು ಕಾಯ, ವಾಚ, ಮನಸಾ ಎಂದು ಈಗಲೂ ವ್ಯಾಪಕವಾಗಿ ಬಳಸುತ್ತಿದ್ದೇವೆ.  ಧಮ್ಮವನ್ನು ಅನುಸರಿಸಲು ಬೇಕಾದ ಯೋಗ್ಯತೆಗಳೇನು ಎಂದರೆ,  “ಚಿತ್ತಶುದ್ಧಿ”. ಚಿತ್ತಶುದ್ಧಿ ಎಂದರೆ,  ಯಾರನ್ನೂ ಕೊಲ್ಲದಿರುವುದು,  ಕಳ್ಳತನ ಮಾಡದಿರುವುದು. ಅನುಮತಿ ಇಲ್ಲದೆ  ತನ್ನದಲ್ಲದನ್ನು ಪಡೆಯದಿರುವುದು.  ಲೈಂಗಿಕ ವಿಚಾರದಲ್ಲಿ ನೈತಿಕತೆ ಪಾಲಿಸುವುದು. ಅತ್ಯಾಚಾರ ಅನಾಚಾರಗಳನ್ನು ಮಾಡದಿರುವುದಾಗಿದೆ.  ಸುಳ್ಳು ಹೇಳಬಾರದು, ಯಾರ ಬಗ್ಗೆಯೂ ಚಾಡಿ ಹೇಳಬಾರದು. ಕೆಲಸಕ್ಕೆ ಬಾರದ ಮಾತುಗಳನ್ನಾಡಬಾರದು. ಇನ್ನೊಬ್ಬರಿಗೆ ಮಾತಿನಿಂದಾಗಲಿ, ಶಾರೀರಿಕವಾಗಲಿ ನೋವು ಮಾಡಬಾರದು.  ಒರಟು ಭಾಷೆ,  ಬೈಗುಳ, ನಿಂದನೆ ಇವುಗಳಿಂದ ದೂರ ಇರಬೇಕು.  ಒಟ್ಟಿನಲ್ಲಿ ಶಿಸ್ತು ಬದ್ಧವಾಗಿ ಬದುಕುವುದೇ ಧಮ್ಮವಾಗಿದೆ. ಬುದ್ಧರ ಪ್ರಕಾರ ಜಗತ್ತಿನಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಬದಲಾವಣೆ ಆಗದಿದ್ದರೆ, ವಿಕಸನವಿಲ್ಲ ಎಂಬುವುದಾಗಿದೆ.

ಅಧಮ್ಮ ಎಂದರೇನು?

ವಾಸ್ತವವಲ್ಲದ ವಿಚಾರಗಳಲ್ಲಿ ನಂಬಿಕೆ ಇಡುವುದು, ಆತ್ಮ ಇದೆ. ಅದು ಅಮರ ಎಂದು ನಂಬುವುದು ಯಜ್ಞ, ಯಾಗಕ್ಕೆ ಪ್ರಾಣಿ ಬಲಿ ನೀಡುವುದು, ಗುಲಾಮರಿಂದ ನಮ್ಮ ಕೆಲಸ ಮಾಡಿಸಿಕೊಳ್ಳುವುದು, ಕಾರ್ಮಿಕರನ್ನು ಹಿಂಸಿಸುವುದು,  ಸ್ವ ಅನುಭವವಿಲ್ಲದೇ ಎಲ್ಲವನ್ನೂ ನಂಬುವುದು ಇವು ಅಧಮ್ಮ. ಅಂದರೆ, ಇವು ಧಮ್ಮವಲ್ಲ. ಕೇವಲ ಬುದ್ಧನ ಬಗ್ಗೆ ಗ್ರಂಥಗಳನ್ನು ಓದುವುದು, ಅದರ ಬಗ್ಗೆ ತಿಳಿದುಕೊಳ್ಳುವುದು ಧಮ್ಮ ಅಲ್ಲವೇ ಅಲ್ಲ. ಬುದ್ಧನ ಬಗ್ಗೆ ಮಾತನಾಡುವುದು, ಚರ್ಚಿಸುವುದು, ಬುದ್ಧನ ಫೋಟೋಗೆ ದೀಪ ಹಚ್ಚಿ ಪೂಜಿಸುವುದು ಇವೆಲ್ಲ ನಿಜವಾದ ಧಮ್ಮ ಅಲ್ಲ. ಕೇವಲ ಭಕ್ತಿಯಿಂದ ಪೂಜಿಸಿದ ಮಾತ್ರಕ್ಕೆ ನೀವು ಧಮ್ಮವನ್ನು ಪಾಲಿಸಲು ಸಾಧ್ಯವಿಲ್ಲ.  ಮೇಲೆ ಹೇಳಲಾಗಿರುವ ವಿಚಾರಗಳನ್ನು ಪಾಲಿಸಬೇಕು ಆಗ ಮಾತ್ರವೇ ನೀವು ಧಮ್ಮವನ್ನು ಪಾಲಿಸುತ್ತಿದ್ದೀರಿ ಎಂದರ್ಥ.

ಸಧಮ್ಮ ಎಂದರೇನು?

ಇದು ಮನಸ್ಸನ್ನು ಶುಚಿಯಾಗಿಟ್ಟುಕೊಳ್ಳುವುದು. ಬುದ್ಧ ಮನಸ್ಸಿನ ಬಗ್ಗೆ ಬಹಳ ಆಳವಾಗಿ ಹೇಳಿದ್ದಾರೆ. ಒಳ್ಳೆಯದು ಹಾಗೂ ಕೆಟ್ಟದಕ್ಕೆಲ್ಲ, ಮನಸ್ಸೇ ಕಾರಣ ಎಂದು ಬುದ್ಧ ಹೇಳುತ್ತಾರೆ. ನಮ್ಮ ಮನಸ್ಸನ್ನು ನಿಯಂತ್ರಿಸುವ ಮೂಲಕ, ಮನಸ್ಸನ್ನು ಮಾಲಿನ್ಯ ಮುಕ್ತಗೊಳಿಸಬೇಕು. ಮಹಿಳೆಯರನ್ನೊಳಗೊಂಡಂತೆ ಎಲ್ಲರೂ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಕೇವಲ ವಿದ್ಯೆಯನ್ನು ಬೋಧಿಸಿದರೆ ಸಾಲದು, ಆ ವಿದ್ಯೆಯಲ್ಲಿ ಮಿಥ್ಯೆ, ಅಂದರೆ ಸುಳ್ಳು ಇರಬಾರದು ಎಂದು ಬುದ್ಧ ಹೇಳುತ್ತಾರೆ. ಶೀಲವಿಲ್ಲದ ಮೈತ್ರಿ ಸದ್ದಮ್ಮ ವಾಗಲಾರದು. ಅದು ಅಪಾಯಕಾರಿಯಾಗಿರುತ್ತದೆ. ಪ್ರಜ್ಞೆ ಮತ್ತು ಶೀಲಗಳ ನಡುವೆ ಕರುಣೆಯನ್ನು ಬೋಧಿಸುವುದೇ ಧಮ್ಮವಾಗಿದೆ.

ಇತ್ತೀಚಿನ ಸುದ್ದಿ