ದೇಶದಲ್ಲಿ ಬಿಜೆಪಿ ಒಂದರ ಹಿಂದೊಂದರಂತೆ ಚುನಾವಣೆ ಗೆಲ್ಲಲು ಹೇಗೆ ಸಾಧ್ಯವಾಗಿದೆ? | ಇವಿಎಂ ಕಾಂಗ್ರೆಸ್ ಗೆ ಒಂದು ಕುಂಟು ನೆಪ ಅಷ್ಟೆ! - Mahanayaka

ದೇಶದಲ್ಲಿ ಬಿಜೆಪಿ ಒಂದರ ಹಿಂದೊಂದರಂತೆ ಚುನಾವಣೆ ಗೆಲ್ಲಲು ಹೇಗೆ ಸಾಧ್ಯವಾಗಿದೆ? | ಇವಿಎಂ ಕಾಂಗ್ರೆಸ್ ಗೆ ಒಂದು ಕುಂಟು ನೆಪ ಅಷ್ಟೆ!

11/11/2020

ಪಾಟ್ನಾ: ಬಿಹಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಿತ್ರಕೂಟ ಎನ್ ಡಿಎ ಭರ್ಜರಿ ಗೆಲುವು ಸಾಧಿಸಿದೆ.  ಇದೇ ಸಂದರ್ಭದಲ್ಲಿ ಸೋಲು ಗೆಲುವಿನ ಚರ್ಚೆ, ವಿಮರ್ಶೆಗಳು ಆರಂಭವಾಗಿವೆ. ಕಾಂಗ್ರೆಸ್ ಹಾಗೂ ಆರ್ ಜೆಡಿ ಕೇವಲ ಭರವಸೆಗಳ ಮೇಲೆ ಮಾತ್ರವೇ ರಾಜಕೀಯ ಮಾಡುತ್ತಿದ್ದರೆ, ಬಿಜೆಪಿ ಹಾಗೂ ಜೆಡಿಯು ತಳಮಟ್ಟದ ಸಂಘಟನೆಯಿಂದ ಪಕ್ಷವನ್ನು ಬಲಪಡಿಸಿ ಚುನಾವಣೆ ಗೆದ್ದಿದೆ.


Provided by

ರಾಜಕೀಯ ಮಾಡಲು ಬಾರದ ಕಾಂಗ್ರೆಸ್ –ಆರ್ ಜೆಡಿ, ಫಲಿತಾಂಶದ ಬಳಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ವಾದಿಸುತ್ತಿದೆ. ಅಷ್ಟಕ್ಕೂ ಕಾಂಗ್ರೆಸ್ ಕೇವಲ, ಇಂದಿರಾ ಗಾಂಧಿ ಕಾಲದಲ್ಲಿ ಮಾಡಲಾದ ಅಭಿವೃದ್ಧಿ ಕೆಲಸಗಳನ್ನು ಕೇಳಿ ಇಂದಿಗೂ ವೋಟು ಕೇಳುತ್ತಿದೆ. ಬಿಜೆಪಿ ದೇಶದಲ್ಲಿ ಇಷ್ಟೊಂದು ದುರಾಡಳಿತವನ್ನು ನೀಡಿದ್ದರೂ ಮತ್ತೆ ಮತ್ತೆ ಅದೇ ಗೆಲ್ಲುತ್ತಿದೆ. ಇದಕ್ಕೆ ಇವಿಎಂ ದೋಷ, ಇನ್ನೊಂದು ದೋಷ ಎಂದು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಆರೋಪಿಸುತ್ತಿವೆ. ಆದರೆ ಇಲ್ಲಿಯವರೆಗೆ ಇವಿಎಂ ವಿರುದ್ಧ ಒಂದೇ ಒಂದು ಬೃಹತ್ ಮಟ್ಟದ ಹೋರಾಟ ದೇಶದಲ್ಲಿ ನಡೆದಿಲ್ಲ.

ಬಿಜೆಪಿಯವರು ಸಂಘಟನೆಯನ್ನು ಸಂಘಟನೆಯಾಗಿ ನಡೆಸುತ್ತಿದ್ದಾರೆ. ರಾಜಕೀಯವನ್ನು ರಾಜಕೀಯವಾಗಿ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್, ಬಿಎಸ್ ಪಿ ಸೇರಿದಂತೆ ದೇಶದ ಇತರ ಎಲ್ಲ ಪಕ್ಷಗಳು ಪಕ್ಷವನ್ನು ಸಂಘಟನೆಯ ರೀತಿಯಲ್ಲಿ ಕೊಂಡುಹೋಗುತ್ತಿದ್ದಾರೆ. ರಾಜಕೀಯ ಎಂದರೆ ಕೇವಲ ಭಾಷಣ ಎಂದು ತಿಳಿದುಕೊಂಡಿದ್ದಾರೆ. ಭಾಷಣ ಮಾಡಿದ ತಕ್ಷಣವೇ ನಮಗೆ ಮತಗಳು ಸಿಗುತ್ತವೆ ಎಂದು ಅಂದುಕೊಂಡಂತಿದೆ. ತಳಮಟ್ಟದಲ್ಲಿ ಪಕ್ಷವನ್ನು ಭದ್ರಪಡಿಸಲು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ವಿಫಲವಾಗಿವೆ. ಬಿಹಾರದಲ್ಲಿ ಕೂಡ ಇದೇ ನಡೆದಿದೆ. ಬಿಜೆಪಿ ದೇಶಾದ್ಯಂತ ಬಹಳ ಚೆನ್ನಾಗಿ ರಾಜಕೀಯ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು, ತಮ್ಮ ಪಕ್ಷವನ್ನು ಸಂಘಟನೆಯ ರೀತಿಯಲ್ಲಿ ಬೆಳೆಸುತ್ತಿದೆ. ರಾಜಕೀಯ ಮಾಡಲು ಅವರಿಗೆ ಗೊತ್ತಿಲ್ಲ.

ಬಿಜೆಪಿ ಪಕ್ಷದ ಕಾರ್ಯಕರ್ತರು ಜನರಲ್ಲಿ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಪ್ರತಿಯೊಂದು ಹಳ್ಳಿಗಳಲ್ಲೂ ಜನರನ್ನು ಭೇಟಿಯಾಗಿ ಬಿಜೆಪಿ ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿವೆ. ಇದೆಲ್ಲ ಸಾಧ್ಯವಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ, ನಿಮಗೆ ಕೊಡುತ್ತಿರುವ ಅಕ್ಕಿಯನ್ನು ಮೋದಿ ಕಳಿಸಿದ್ದು, ಮೊದಲಾದ ವಿಚಾರಗಳನ್ನು ಒಂದೊಂದು ಹಳ್ಳಿಗಳಲ್ಲೂ ಹೇಳಿಕೊಂಡು ಬರುತ್ತಾರೆ. ಬಿಜೆಪಿ ಅತ್ಯಂತ ಪ್ರಾಬಲ್ಯ ಇರುವ ಪ್ರತಿ ಹಳ್ಳಿಗಳಲ್ಲಿಯೂ ಇಂತಹ ವಿಚಾರಗಳನ್ನು ಹೇಳಲೆಂದೇ ಕಾರ್ಯಕರ್ತರನ್ನು ಖರ್ಚು ವೆಚ್ಚ ನೀಡಿ ಕಳುಹಿಸುತ್ತಾರೆ. ಆದರೆ, ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಇವೆಲ್ಲ ಅಗತ್ಯವಿಲ್ಲ.  ಅವರು ಜಾತ್ಯಾತೀತ, ಅದು ಇದು ಎಂದು ಹಳೆಯ ಕಾಲದ ಭಾಷಣದಲ್ಲಿಯೇ ತೊಡಗಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಪ್ರತಿಯೊಂದು ಚುನಾವಣೆಯಲ್ಲಿ ಗೆಲ್ಲುತ್ತಿದೆ. ಇವಿಎಂ ದೋಷ ನಿಜವಾಗಿಯೂ ಇದೆ ಎಂದಾಗಿದ್ದರೆ, ಕಾಂಗ್ರೆಸ್ ಯಾಕೆ ಇಲ್ಲಿಯವರೆಗೆ ದೊಡ್ಡಮಟ್ಟದ ಹೋರಾಟ ಮಾಡಿಲ್ಲ?  ಇವಿಎಂ ವಿಚಾರಕ್ಕೆ ಒಂದು ಬಾರಿಯಾದರೂ ಭಾರತ್ ಬಂದ್ ಆಗಿದೆಯೇ? ಇಲ್ಲವಲ್ಲ? ಹಾಗಿದ್ದರೆ ಇವಿಎಂ ದೋಷ ಎಂದು ಕಾಂಗ್ರೆಸ್ ದೂರುತ್ತಿರುವುದು ಸುಳ್ಳೇ? ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರಿಸಬೇಕಿದೆ.

ಇತ್ತೀಚಿನ ಸುದ್ದಿ