ಬಿಜೆಪಿ ಮತ್ತೆ ಬಂದ್ರೆ ಚುನಾವಣಾ ಬಾಂಡ್ ಜಾರಿಗೆ ತರುತ್ತೇವೆ: ಸಚಿವೆ ನಿರ್ಮಲಾ‌ ವಿವಾದಾತ್ಮಕ ಹೇಳಿಕೆ - Mahanayaka
5:19 AM Wednesday 27 - August 2025

ಬಿಜೆಪಿ ಮತ್ತೆ ಬಂದ್ರೆ ಚುನಾವಣಾ ಬಾಂಡ್ ಜಾರಿಗೆ ತರುತ್ತೇವೆ: ಸಚಿವೆ ನಿರ್ಮಲಾ‌ ವಿವಾದಾತ್ಮಕ ಹೇಳಿಕೆ

20/04/2024


Provided by

ಸುಪ್ರೀಂಕೋರ್ಟ್‌ ಅಸಾಂವಿಧಾನಿಕ ಎಂದು ರದ್ದುಗೊಳಿಸಿದ್ದ ‘ಚುನಾವಣಾ ಬಾಂಡ್ ಯೋಜನೆ’ಯನ್ನು ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರತಿಪಕ್ಷಗಳು ‘ಸ್ವತಂತ್ರ ಭಾರತದ ಅತಿದೊಡ್ಡ ಹಗರಣ’ ಎಂದು ಟೀಕಿಸಿದ್ದ ವಿವಾದಾತ್ಮಕ ಯೋಜನೆಯನ್ನು ಮತ್ತೆ ಜಾರಿಗೆ ತರುವ ಬಗ್ಗೆ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿರ್ಮಲಾ ಸೀತರಾಮನ್, ಚುನಾವಣಾ ಬಾಂಡ್‌ ಕುರಿತು ಸುಪ್ರೀಂಕೋರ್ಟ್ ತೀರ್ಪನ್ನು ಕೇಂದ್ರ ಸರ್ಕಾರ ಮರುಪರಿಶೀಲನೆಗೆ ಕೋರುತ್ತದೆಯೇ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಈ ಕುರಿತು ಸ್ವೀಕಾರಾರ್ಹವಾಗಿರುವ ಚೌಕಟ್ಟನ್ನು ರೂಪಿಸಲು ಅಥವಾ ತರಲು ನಾವು ಏನು ಮಾಡಬೇಕೆಂದು ನೋಡಬೇಕು ಎಂದು ಹೇಳಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಚುನಾವಣಾ ಬಾಂಡ್‌ಗಳನ್ನು ವಾಪಸ್ ತರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ , ನಾವು ಯಾವುದೇ ಮಸೂದೆಯನ್ನು ತರುತ್ತೇವೆ ಎಂದು ಹೇಳುತ್ತಿಲ್ಲ. ಆದರೆ ಇದಕ್ಕೆ ಸ್ವಲ್ಪ ಪರಿಹಾರವನ್ನು ಕಂಡುಹಿಡಿಯಬೇಕು. ಯಾಕೆಂದರೆ ನಾವು ರಾಜಕೀಯ ನಿಧಿಯನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ. ರಾಜಕೀಯದಲ್ಲಿರುವ ಕಪ್ಪುಹಣವನ್ನು ತೊಡೆದು ಹಾಕುತ್ತೇವೆ‌. ಇದು 2014ರಿಂದ ಬಿಜೆಪಿ ಮತ್ತು ನರೇಂದ್ರ ಮೋದಿ ನೀಡಿದ ಭರವಸೆಯಾಗಿದೆ ಎಂದು ಹೇಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ