ವರ್ತಕನ ಜ್ಞಾನಕ್ಕೆ ಬುದ್ಧರು ನೀಡಿದ ಉಡುಗೊರೆ - Mahanayaka
4:25 PM Wednesday 21 - January 2026

ವರ್ತಕನ ಜ್ಞಾನಕ್ಕೆ ಬುದ್ಧರು ನೀಡಿದ ಉಡುಗೊರೆ

12/11/2020

ಮೊಗ್ಗಲ್ಲಾನು ಗೌತಮ ಬುದ್ಧರೊಡನೆ ಭಿಕ್ಷೆಗೆ ಹೋದನು. ಈ ಸಂದರ್ಭದಲ್ಲಿ ಒಬ್ಬ ವರ್ತಕ ಭಿಕ್ಷುಕರಾದ ಇವರನ್ನು ವಿರೋಧಿಸುತ್ತಾನೆ.  ಆಗ ಬುದ್ಧರು, “ವರ್ತಕನೆ ಕ್ಷಮಿಸು, ನೀನು ಸಂಜೆ ವಿಹಾರಕ್ಕೆ ಬಂದು ನಮ್ಮ ಆತಿಥ್ಯ ಸ್ವೀಕರಿಸು” ಎಂದು ಆಹ್ವಾನಿಸುತ್ತಾರೆ.

ಸಂಜೆ ವರ್ತಕ ವಿಹಾರಕ್ಕೆ ಬರುತ್ತಾನೆ. ಆತನಿಗೆ ಉತ್ತಮ ಭೋಜನವನ್ನು ಬುದ್ಧರು ನೀಡುತ್ತಾರೆ. ಹಾಗೆಯೇ ವರ್ತಕ ಅಲ್ಲಿಂದ ಹೊರಡುವಾಗ ಬುದ್ಧರು, ಆತನಿಗೆ ವಜ್ರದ ಒಂದು ಉಂಗೂರವನ್ನು ನೀಡುತ್ತಾರೆ. ಇದನ್ನೆಲ್ಲ ನೋಡಿದ ಶಿಷ್ಯರಿಗೆ ಗೊಂದಲವಾಯಿತು. ಅವರು, ಹೀಗೇಕೆ ಮಾಡಿದಿರಿ?” ಎಂದು ಬುದ್ಧರನ್ನು ಪ್ರಶ್ನಿಸುತ್ತಾರೆ.

ಆಗ ಬುದ್ಧರು, “ವರ್ತಕ ಜ್ಞಾನಿಯಾಗಿದ್ದಾನೆ. ಹಾಗಾಗಿಯೇ ಆತ ಭಿಕ್ಷೆ ನೀಡದೆಯೇ ಕಳುಹಿಸಿದ್ದಾನೆ. ಭಿಕ್ಷಾಟನೆ ಯಾರಿಗೂ ಸಲ್ಲದು. ಈ ಜ್ಞಾನವನ್ನು ನಾವು ವರ್ತಕನಿಂದ ಕಲಿತೆವು. ಹಾಗಾಗಿ ಅವನನ್ನು ಸತ್ಕರಿಸುವುದು ನಮ್ಮ ಪುಣ್ಯವಲ್ಲವೇ ಎಂದು ಶಿಷ್ಯರನ್ನು ಬುದ್ಧರು ಪ್ರಶ್ನಿಸುತ್ತಾರೆ.

ಈ ರೀತಿಯಾಗಿ ಬುದ್ಧರು ಮಾತ್ರವೇ ಯೋಚಿಸಲು ಸಾಧ್ಯ ಅಲ್ಲವೇ? ನಮ್ಮ ಬಗ್ಗೆ ಯಾರಾದರೂ ಚಿಕ್ಕ ಮಾತು ಹೇಳಿದರೂ ಅದು ಸರಿಯೋ ತಪ್ಪೋ ಎಂದು ಗ್ರಹಿಸದೇ ಅವರ ಮೇಲೆ ಬಿದ್ದು, ರೇಗಾಡುತ್ತೇವೆ, ಕೆಟ್ಟ ಕೆಟ್ಟ ಮಾತಿನಿಂದ ಆತನ ಬಾಯಿ ಮುಚ್ಚಿಸುತ್ತೇವೆ, ವಿತಂಡವಾದ ಮಾಡುತ್ತೇವೆ. ಆದರೆ, ಯಾರದ್ದಾರೂ ಮಾತಿನಲ್ಲಿ ಸತ್ಯ ಇದ್ದರೆ, ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲಿಯೂ ಇರಬೇಕು.

ಬುದ್ಧ ಎಂದರೆ, ಮಹಾಜ್ಞಾನಿ. ಆದರೆ, ತನ್ನಲಿಲ್ಲದ ಜ್ಞಾನ ಇನ್ನೊಬ್ಬನ ಬಳಿ ಇದೆ ಎಂದು ತಿಳಿದರೆ, ಬುದ್ಧರು ಆ ಜ್ಞಾನವನ್ನು ಗೌರವಿಸುತ್ತಿದ್ದರು. ಸತ್ಯವನ್ನು ಒಪ್ಪುತ್ತಿದ್ದರು. ಆದರೆ ಇಂದು ಬುದ್ಧ ನಮ್ಮವ ಎಂದು ಹೇಳುತ್ತಿರುವ ಬಹುತೇಕರು, ಕೇವಲ ಬುದ್ಧನ ಮುಖವಾಡಗಳನ್ನು ಹಾಕಿಕೊಂಡಿದ್ದಾರೆ. ತಮ್ಮ ತಪ್ಪುಗಳನ್ನು ವಿರೋಧಿಸುವವರನ್ನು ಅತೀ ಕೆಟ್ಟ ಶಬ್ಧಗಳಿಂದ ಬೈಯ್ಯುತ್ತಾರೆ. ವಿರೋಧವನ್ನು ಸವಾಲಾಗಿ ಸ್ವೀಕರಿಸದೇ ದ್ವೇಷದಿಂದ ನೋಡುತ್ತಾರೆ. ಇವೆಲ್ಲರು ಬುದ್ಧ ನಮ್ಮವ ಎಂದು ಹೇಳುತ್ತಾರೆ. ಆದರೆ, ನಿಜವಾಗಿಯೂ ಬುದ್ಧರನ್ನು ಅನುಸರಿಸುವವರು ಎಂದಿಗೂ ಇಂತಹ ಕೆಲಸಗಳಲ್ಲಿ ತೊಡಗಲಾರರು.

ಇತ್ತೀಚಿನ ಸುದ್ದಿ