ನಾರದಾ ಸ್ಟಿಂಗ್ ಪ್ರಕರಣ: ಪತ್ರಕರ್ತ ಮ್ಯಾಥ್ಯೂ ಸ್ಯಾಮ್ಯುಯೆಲ್ಗೆ ಮತ್ತೆ ಸಮನ್ಸ್ ನೀಡಿದ ಸಿಬಿಐ

ನಾರದಾ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದಲ್ಲಿ ಪತ್ರಕರ್ತ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತೆ ಸಮನ್ಸ್ ನೀಡಿದೆ.
ನಾರದಾ ಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 22 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ತನಿಖಾ ಸಂಸ್ಥೆಯ ಕಚೇರಿಗೆ ಹಾಜರಾಗುವಂತೆ ಸಿಬಿಐಯು ಹಿರಿಯ ಪತ್ರಕರ್ತರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಸ್ಯಾಮ್ಯುಯೆಲ್ ಗೆ ಸಿಆರ್ ಪಿಸಿಯ ಸೆಕ್ಷನ್ 160ರ ಅಡಿಯಲ್ಲಿ ಇಮೇಲ್ ಮೂಲಕ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಯಾಮ್ಯುಯೆಲ್ ಅವರು 2014 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾಡಿದ ಕುಟುಕು ಕಾರ್ಯಾಚರಣೆಯ ಬಗ್ಗೆ ಪ್ರಶ್ನಿಸಲಾಗುತ್ತದೆ. ಅಂದಹಾಗೇ ಈ ತನಿಖಾ ವರದಿ 2016 ರಲ್ಲಿ ಪ್ರಕಟವಾಗಿತ್ತು.
ಈ ಹಿಂದೆ ಜುಲೈ 16 ರಂದು ತನಿಖಾ ಸಂಸ್ಥೆಯು ಇವರಿಗೆ ಬೆಂಗಳೂರಿಗೆ ಬರುವಂತೆ ಕರೆ ನೀಡಿತ್ತು. ಆದರೆ ಆ ಸಮಯದಲ್ಲಿ ಚುನಾವಣೆಗಳನ್ನು ವರದಿ ಮಾಡಲು ಅಮೆರಿಕದಲ್ಲಿದ್ದ ಕಾರಣ ಹೆಚ್ಚಿನ ಸಮಯವನ್ನು ಕೋರಿದ್ದರು.
ಸಿಬಿಐ ಈ ಹಿಂದೆಯೂ ಸ್ಯಾಮ್ಯುಯೆಲ್ ಗೆ ಮೂರು ಬಾರಿ ಕೋಲ್ಕತ್ತಾ ಕಚೇರಿಗೆ ಬರುವಂತೆ ಕರೆ ನೀಡಿತ್ತು. ಆದರೆ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಸ್ಯಾಮ್ಯುಯೆಲ್, ವಿಚಾರಣೆಗೆ ಹಾಜರಾಗಲು ಕೋಲ್ಕತ್ತಾಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತನಿಖಾ ಸಂಸ್ಥೆಗೆ ಉತ್ತರಿಸಿದ್ದರು.
ಕೋಲ್ಕತ್ತಾ ಬ್ಯೂರೋದಲ್ಲಿ ಮತ್ತು ನ್ಯಾಯಾಲಯದಲ್ಲಿ ಹಲವಾರು ಬಾರಿ ಸಿಬಿಐ ಸಮನ್ಸ್ ಗೆ ಹಾಜರಾಗುವ ಮೂಲಕ ಈಗಾಗಲೇ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಿಬಿಐ ಅವರನ್ನು ಪ್ರಶ್ನಿಸಬೇಕಾದರೆ, ತನಿಖಾ ಸಂಸ್ಥೆಯು ಅವರಿಗೆ ಸಾರಿಗೆ, ವಸತಿ ವೆಚ್ಚವನ್ನು ಒದಗಿಸಬೇಕು ಅಥವಾ ಅವರನ್ನು ಹತ್ತಿರದ ಸ್ಥಳಕ್ಕೆ ಕರೆಸಿಕೊಳ್ಳಬೇಕು ಎಂದು ಅವರು ಹೇಳಿದ್ದರು.
ಅವರ ಮೇಲ್ಮನವಿಯ ನಂತರ, ಕೇಂದ್ರ ತನಿಖಾ ಸಂಸ್ಥೆಯು ಜುಲೈ 16 ರಂದು ಅವರನ್ನು ತಮ್ಮ ಬೆಂಗಳೂರು ಬ್ಯೂರೋಗೆ ಕರೆಸಿತ್ತು. ಆದರೆ ಅವರು ಯುಎಸ್ ನಲ್ಲಿದ್ದರಿಂದ ಹಾಜರಾಗಲು ಸಾಧ್ಯವಾಗಲಿಲ್ಲ. ಇದಾದ ನಂತರ ತನಿಖಾ ಸಂಸ್ಥೆಯು ಅವರಿಗೆ ಮತ್ತೊಂದು ನೋಟಿಸ್ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth